ADVERTISEMENT

ಲೋಕಾಯುಕ್ತರ ಆದೇಶದ ಬಳಿಕವೂ ಮೀನಾಮೇಷ

ಅನಧಿಕೃತ ಹೋಟೆಲ್‌ ಕಾಮಗಾರಿ ಮತ್ತೆ ಆರಂಭ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 9:49 IST
Last Updated 1 ಜನವರಿ 2014, 9:49 IST

ಗಂಗಾವತಿ: ನಗರದ ಮಾಂತಗೊಂಡ ನೀಲಮ್ಮ ಮೂಕಪ್ಪ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಸ್ತೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಅನಧಿಕೃತ ನಿರ್ಮಾಣ ಮಾಡಿರುವ ಅಕ್ರಮ ಹೋಟೆಲ್‌ ಕಟ್ಟಡದ ನೆಲಸಮಕ್ಕೆ
ಲೋಕಾಯುಕ್ತರ ಆದೇಶದ ಬಳಿಕವೂ ಕಟ್ಟಡ ನಿರ್ಮಾಣ ಪುನರ್‌ ಆರಂಭವಾಗಿದೆ.

ಸುಮಾರು 15 ವರ್ಷದಿಂದ ನಗರಸಭೆಯ ಕೆಲ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಕಾಲೇಜಿನ ವಿದ್ಯಾರ್ಥಿಗಳ ಓಡಾಟಕ್ಕೆ ಇದ್ದ ಸಾರ್ವಜನಿಕ ರಸ್ತೆಯನ್ನು ಅತಿಕ್ರಮಿಸಿದ ವ್ಯಕ್ತಿಗೆ ಹಣ ಪಡೆದು ನಕಲಿ ದಾಖಲೆ ಸೃಷ್ಟಿಸಿ ಕೊಟ್ಟಿದ್ದರು ಎಂಬ ಆರೋಪ ವ್ಯಕ್ತವಾಗಿತ್ತು.

ಈ ಹಿನ್ನೆಲೆ ಅಮರ ಪಾಟೀಲ್ ಎಂಬ ಯುವಕ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಲೋಕಾಯುಕ್ತರಿಗೆ ದೂರು ನೀಡಿದ್ದರು. ನಾಲ್ಕು ತಿಂಗಳ ಹಿಂದೆಯೆ ಅಕ್ರಮ ಕಟ್ಟಡ ನೆಲಸಮ ಮಾಡುವಂತೆ ಲೋಕಾಯುಕ್ತರು, ನಗರಸಭೆಗೆ ಆದೇಶ ಜಾರಿ ಮಾಡಿದ್ದರು.

ಲೋಕಾಯುಕ್ತರ ಆದೇಶಕ್ಕೆ ಎಚ್ಚೆತ್ತ  ನಗರಸಭೆ ಕಾಟಾಚಾರಕ್ಕೆ ಎಂಬಂತೆ ಎರಡು ಜೆಸಿಬಿ ವಾಹನದ ಮೂಲಕ  ಕಟ್ಟಡ ನೆಲಸಮಕ್ಕೆ ಮುಂದಾಗಿತ್ತು. ಆದರೆ ರಾಜಕೀಯ ನಾಯಕರ ಒತ್ತಡಕ್ಕೆ ಮಣಿದ ಅಧಿಕಾರಿಗಳು ನೆಲಸಮಕ್ಕೆ ಮುಂದಾಗಿದ್ದ ಜೆಸಿಬಿ ವಾಹನವನ್ನು ವಾಪಾಸ್‌ ಕರೆಯಿಸಿಕೊಂಡಿದ್ದರು.

‘ಲೋಕಾಯುಕ್ತರ ಆದೇಶದ ಬಳಿಕ ಎರಡು ತಿಂಗಳ ಕಾಲ ಹೋಟೆಲ್‌ ಸ್ಥಗಿತವಾಗಿತ್ತು. ಇದೀಗ ಮತ್ತೆ ಕಟ್ಟಡ ನಿರ್ಮಾಣ ಕಾಮಗಾರಿ ಮುಂದುವರೆದಿದ್ದು, ಎರಡು ವಾರದಿಂದ ಮತ್ತೆ ಹೊಟೇಲ್‌ ವ್ಯವಹಾರ ಆರಂಭವಾಗಿದೆ’ ಎಂದು ಯುವಕ ದಲಿತ ಸಂಘಟನೆಯ ಹಂಚಿನಾಳ ದುರುಗಪ್ಪ ದೂರಿದ್ದಾರೆ.

‘ಹೋಟೆಲ್‌ ಕಟ್ಟಡದ ಅಕ್ರಮದ ಬಗ್ಗೆ ಸಾಕಷ್ಟು ಬಾರಿ ಮಾಧ್ಯಮಗಳಲ್ಲಿ ವರದಿ ಬಂದರೂ ಪೌರಾಯುಕ್ತರು ಆಸಕ್ತಿ ವಹಿಸುತ್ತಿಲ್ಲದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಕೆಲ ಸದಸ್ಯರು ಹಾಗೂ ಸಿಬ್ಬಂದಿ ಹೋಟೆಲ್‌ ಮಾಲೀಕರಿಂದ ಹಣ ಪಡೆದಿದೆ’ ಎಂದು ದಲಿತ ಮುಖಂಡ ಆರತಿ ತಿಪ್ಪಣ್ಣ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.