ADVERTISEMENT

ವಾರದಲ್ಲಿ 20ಕ್ಕೂ ಹೆಚ್ಚು ಜನರಿಗೆ ಡೆಂಗೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 10:19 IST
Last Updated 6 ಡಿಸೆಂಬರ್ 2013, 10:19 IST

ಗಂಗಾವತಿ: ನಗರಸಭಾ ವ್ಯಾಪ್ತಿಯ 18ನೇ ವಾರ್ಡ್‌ ಗಾಂಧಿನಗರದಲ್ಲಿ ಒಂದು ವಾರದಿಂದ 20ಕ್ಕೂ ಹೆಚ್ಚು ಜನರಿಗೆ ಡೆಂಗೆ ಜ್ವರ ಕಾಣಿಸಿಕೊಂಡಿದ್ದು, ಜ್ವರ ಪೀಡಿತರು ನಗರದ ಸರ್ಕಾರಿ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಇದೇ ವಾರ್ಡ್‌ನ ಸೋಮನಾಥ ಗಟ್ಟಿತಲೆ ಎಂಬುವವರ ಪುತ್ರಿ ಭುವನೇಶ್ವರಿ ಡೆಂಗೆ ಜ್ವರದಿಂದ ಮೃತಪಟ್ಟ ಘಟನೆ ಮಾಸುವ ಮುನ್ನವೇ ವಾರ್ಡ್‌ನಲ್ಲಿ ಸಾಮೂಹಿಕ ಡೆಂಗೆ ಜ್ವರ ಕಾಣಿಸಿಕೊಳ್ಳುತ್ತಿರುವುದು ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

ನಗರದ ಪಾಟೀಲ್‌ ನರ್ಸಿಂಗ್‌ ಹೋಂನಲ್ಲಿ ಗುರುವಾರ ವಾರ್ಡಿನ ಸುಳೇಕಲ್ ಸೋಮನಾಥ ಭಂಡಾರಿ ಚಿಕಿತ್ಸೆಗೆ ದಾಖಲಾಗಿದ್ದು, ರಕ್ತ ಪರೀಕ್ಷೆಯಲ್ಲಿ ಡೆಂಗೆ ಎಂದು ದೃಢಪಟ್ಟಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಇದೇ ವಾರ್ಡ್‌ನ ಯಂಕಪ್ಪ ಸುಳೇಕಲ್‌ರ ಪುತ್ರಿ ಶ್ವೇತಾ  ಉಲ್ಲೇಶ ಸುಳೇಕಲ್‌ ಅವರ ಪೂಜಾ, ಕ್ಯಾದಿಗುಂಪಿ ಯಮನಪ್ಪರ ಮಗಳು ಬಸಮ್ಮ ಅವರಿಗೆ ಡೆಂಗೆ ದೃಢಪಟ್ಟಿದ್ದು ನಗರದ ಬಳ್ಳಾರಿ ಕ್ಲಿನಿಕ್‌ನಲ್ಲಿ ಚಿಕಿತ್ಸೆಗೆ ದಾಖಲಿಸಿರುವುದು ತಿಳಿದು ಬಂದಿದೆ.

ಆಗೋಲಿ ಬಸವರಾಜರ ಪುತ್ರ ವೀರೇಶ ಹಾಗೂ ಹನುಮನಾಳ ಮೌಲಪ್ಪರ ಮಗಳು ಮೀನಾ  ರಕ್ತ ಪರೀಕ್ಷೆಯಲ್ಲಿ ಡೆಂಗೆ ದೃಢಪಟ್ಟಿದ್ದು, ಚಿಕಿತ್ಸೆಗಾಗಿ ಬಳ್ಳಾರಿಯ ವಿಜಯನಗರ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ವಾರ್ಡ್‌ನ ನಿವಾಸಿಗಳು ತಿಳಿಸಿದ್ದಾರೆ.

ವಡ್ಡರಹಟ್ಟಿಯ ಚೇತನಕುಮಾರ ಶಶಿಧರ ಸ್ವಾಮಿಗೆ ಡೆಂಗೆ ದೃಢಪಟ್ಟ ಹಿನ್ನೆಲೆ ಪಾಟೀಲ್‌ ನರ್ಸಿಂಗ್‌ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ವಾರ ಯಶೋಧಾ ಆಸ್ಪತ್ರೆಯಲ್ಲಿ ವಾರ್ಡ್‌ನ ಏಳಕ್ಕೂ ಹೆಚ್ಚು ಜನ ಡೆಂಗೆ ಚಿಕಿತ್ಸೆಗೆ ದಾಖಲಾಗಿದ್ದರು ಎಂದು ಹನುಮಂತ ಅಯೋಧ್ಯ ತಿಳಿಸಿದ್ದಾರೆ.

ನಗರಸಭೆಯ ನಿರ್ಲಕ್ಷ್ಯ: ‘ವಾರ್ಡ್‌ನಲ್ಲಿ ಸ್ವಚ್ಛತೆಯ ಕೊರತೆಯಿದೆ. ಈ ಬಗ್ಗೆ ಸಾಕಷ್ಟು ಬಾರಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರೂ ನೈರ್ಮಲ್ಯ ನಿರೀಕ್ಷಕರಾಗಲಿ, ಆರೋಗ್ಯ ಇಲಾಖೆಯವರಾಗಲಿ ಭೇಟಿ ನೀಡಿಲ್ಲ’ ಎಂದು ವಾರ್ಡ್‌ನ ಯಂಕಪ್ಪ ಸುಳೇಕಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಎರಡು ತಿಂಗಳಲ್ಲಿ ವಾರ್ಡ್‌ನಲ್ಲಿ ಸುಮಾರು 40ಕ್ಕೂ ಹೆಚ್ಚು ಡೆಂಗೆ ಪ್ರಕರಣ ಪತ್ತೆಯಾಗಿವೆ. ಬೆಳಕಿಗೆ ಬಾರದ ಇನ್ನು ಹಲವು ಪ್ರಕರಣ ಇವೆ. ನಗರಸಭೆಯಿಂದ ಜಾಗೃತಿ ಮುಡಿಸುವ ಇಲ್ಲವೆ ಫಾಗಿಂಗ್‌ ಮಾಡುವ ಕಾರ್ಯ ನಡೆಯುತ್ತಿಲ್ಲ’ ಎಂದು ವಾರ್ಡ್‌ನ ಸೂಜಿಬತ್ತಿ ಹುಲ್ಲೇಶ ದೂರಿದ್ದಾರೆ.

ಪ್ರತಿ ತಿಂಗಳು ನಗರಸಭೆ ಬ್ಲಿಚಿಂಗ್‌ ಖರೀದಿಗೆ ರೂ 12 ಲಕ್ಷ  ವ್ಯಯಸುತ್ತಿದೆ. ಆದರೆ ಎಲ್ಲಿ ಸಿಂಪಡಿಸುತ್ತಿದ್ದಾರೆ ಎಂಬುವುದು ಗೊತ್ತಾಗುತ್ತಿಲ್ಲ. ವಾರ್ಡಿನ ಸದಸ್ಯೆಯ ಸಂಬಂಧಿಕರ ಪೈಕಿ ಮೂವರಿಗೆ ಡೆಂಗೆ ಲಕ್ಷಣ ಕಾಣಿಸಿಕೊಂಡಿದ್ದರೂ ನಗರಸಭೆ ಸಿಬ್ಬಂದು ಗಮನ ಹರಿಸಿಲ್ಲ ಎಂದು ವಾರ್ಡಿನ ನಿವಾಸಿಗಳು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.