ADVERTISEMENT

ವಿಜ್ಞಾನ ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ

ವಿಜಯನಗರ ಪ್ರೌಢಶಾಲೆ ‘ಸುವರ್ಣ’ ಸಮಾರಂಭಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 7:41 IST
Last Updated 23 ಡಿಸೆಂಬರ್ 2013, 7:41 IST

ಮುನಿರಾಬಾದ್‌: ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ವಿಜಯನಗರ ಪದವಿಪೂರ್ವ ಕಾಲೇಜು ಆವರಣದಲ್ಲಿ ವಿಜ್ಞಾನ ಕಾಲೇಜು ಕಟ್ಟಡಕ್ಕೆ ಭಾನು ವಾರ ಶಿಲಾನ್ಯಾಸ ನೆರವೇರಿಸಲಾಯಿತು.

ಭಾನುವಾರ ನಡೆದ ವಿಜಯನಗರ ಪ್ರೌಢಶಾಲೆ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ವಿಜ್ಞಾನ ಕಾಲೇಜು, ಸಂಘದ ಪೂರ್ವ ಪ್ರಾಥಮಿಕ ಶಾಲೆ ಮತ್ತು ಕಾಯಂ ವೇದಿಕೆ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.

ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿ, ಸ್ವಾತಂತ್ರ ಪೂರ್ವ ಬ್ರಿಟಿಷರ ಮತ್ತು ನಿಜಾಮರ ಆಳ್ವಿಕೆಯ ನಿಯಂತ್ರಣದಲ್ಲಿದ್ದ ರಾಜ್ಯದ ಕೆಲವು ಪ್ರದೇಶಗಳಲ್ಲಿ ಮಾನವನ ವಿಕಾಸಕ್ಕೆ ಮಹತ್ವ ನೀಡುತ್ತಿರಲಿಲ್ಲ. ಆ ಕಾಲದಲ್ಲಿ 1916ರಲ್ಲಿ ಶಿಕ್ಷಣದ ಮಹ ತ್ವವನ್ನು ತಿಳಿದು ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘ, ಬೆಳಗಾವಿಯ ಲಿಂಗಾಯತ ಎಜ್ಯುಕೇಷನ್‌ ಸೊಸೈಟಿ ಶಾಲೆಗಳನ್ನು ಸ್ಥಾಪಿಸಿದವು ಎಂದರು
ದೇಶದ ಜನಸಂಖ್ಯೆಯ ಅರ್ಧದಷ್ಟು ಅನಕ್ಷರಸ್ಥರಿದ್ದಾರೆ. ಯುವಕರು ಮುಂದೆ ಬರಬೇಕು. ವೈಚಾರಿಕ ಕ್ರಾಂತಿ ನಡೆಯಬೇಕು. ಹಿಂದುಳಿದ ಪ್ರದೇಶದಲ್ಲಿ 2 ಸಾವಿರ ವಿದ್ಯಾರ್ಥಿಗಳ ಹಾಸ್ಟೆಲ್‌ ನಿರ್ಮಿಸಿ ಶಿಕ್ಷಣ ನೀಡುತ್ತಿರುವ ಕೊಪ್ಪಳ ಸಂಸ್ಥಾನ ಗವಿಮಠದ ಸೇವೆ ಅನನ್ಯ ಎಂದರು.

ಸಂಸದ ಎಸ್‌.ಶಿವರಾಮಗೌಡ ಮಾತನಾಡಿ, ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘ, ಬೆಳಗಾವಿಯ ಕೆಎಲ್‌ಇ, ತುಮಕೂರಿನ ಸಿದ್ಧಗಂಗಾ ಸಂಸ್ಥೆಗಳು ಶಿಕ್ಷಣ ಪ್ರಸಾರಕ್ಕೆ ಹೆಚ್ಚಿನ ಕೊಡುಗೆ ನೀಡಿವೆ ಎಂದರು.

ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಹಳೆ ವಿದ್ಯಾರ್ಥಿ ನೆಲಮಂಗಲ ಶಾಸಕ ಶ್ರೀನಿವಾಸಮೂರ್ತಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಸಂಘದ ಉಪಾಧ್ಯಕ್ಷ ಕೆ.ಎಂ.ಮಹೇಶ್ವರಸ್ವಾಮಿ ಮಾತನಾ ಡಿದರು. ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ಪರವಾಗಿ ಗ್ರಾಮದ ವೈದ್ಯ ಡಾ.ಎಚ್‌. ಆನಂದ, ವೈದ್ಯೆ ಪದ್ಮಿನಿ ಪ್ರಸಾದ ಹಿಂದಿನ ಶಿಕ್ಷಕರ ಸೇವೆ ಸ್ಮರಿಸಿದರು.

ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ, ಪದಾಧಿಕಾರಿಗಳು ಈಶಪ್ಪ ಸೊನ್ನದ, ಮಹೇಶ್ವರಸ್ವಾಮಿ, ಸಂಗನಕಲ್ಲು ಹಿಮಂತರಾಜ, ವಾಗೀಶ ಪಂಡಿತಾರಾಧ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ರಮೇಶ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ರವಿ, ಪ್ರಾಚಾರ್ಯ ಬಸವರಾಜ, ಮುಖ್ಯಗುರು ಗಂಗಾದೇವಿ, ಹಳೆ ವಿದ್ಯಾರ್ಥಿಗಳ ಪೈಕಿ ವೆಂಕಟರಮಣ, ಇಂದ್ರಕುಮಾರ ಭಂಡಾರಿ, ಉದ್ಯಮಿ ಗಳಾದ ಓಂಕಾರ್‌, ಪ್ರದೀಪ ಕೊಣ್ಣೂರ, ಸಂಜಯ ಅಗರವಾಲ್‌ ಇದ್ದರು.

ಜೆ.ಎಸ್‌. ನೇಪಾಕ್ಷಪ್ಪ ಸ್ವಾಗತಿಸಿ, ಪುಷ್ಪಾವತಿ ಸಂಗಡಿಗರು ಪ್ರಾರ್ಥಿಸಿ, ಸ್ವಾತಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.