ADVERTISEMENT

ಶರಣರ ವಚನ ಈಗ ಭಾಷಣದ ವಸ್ತು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 6:50 IST
Last Updated 11 ಫೆಬ್ರುವರಿ 2012, 6:50 IST

ಯಲಬುರ್ಗಾ: ಅಪ್ರಮಾಣಿಕತೆ, ಅನೀತಿ, ದ್ರೋಹ, ವಂಚನೆ ಇವೇ ಮೊದಲಾದ ಅಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡ ಜನರೆ ಹೆಚ್ಚಿರುವ ಇವತ್ತಿನ ಸಂದರ್ಭದಲ್ಲಿ ಶರಣರು ಹಾಗೂ ಅವರ ವಚನಗಳು ಕೇವಲ ಭಾಷಣದ ವಸ್ತುಗಳಾಗಿವೆ ಹೊರೆತು ಅವುಗಳ ಆಚರಣೆ, ಅನುಕರಣೆಗಿಲ್ಲ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ ಕಳವಳ ವ್ಯಕ್ತಪಡಿಸಿದರು.

ಸ್ಥಳೀಯ ಸಿದ್ಧರಾಮೇಶ್ವರ ಸ್ವಾಮೀಜಿಯವರ 12ನೇ ವಾರ್ಷಿಕ ಪಟ್ಟಾಧಿಕಾರ ಮಹೋತ್ಸವದ ಪ್ರಯುಕ್ತ `ಸುಜ್ಞಾನ ಪ್ರಭೆ~ ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರತಿಯೊಂದು ಸಭೆ ಸಮಾರಂಭಗಳ್ಲಿ ಶರಣರ ವಚನಗಳನ್ನು ಹೇಳುತ್ತಾರೆ, ಕೇಳುತ್ತಾರೆ ಆದರೆ ಅದರ ತತ್ವಕ್ಕೆ, ನೀತಿಗೆ ಬದ್ಧರಾಗಿ ಯಾರೊಬ್ಬರು ನಡೆದುೊಳ್ಳುವ ಪ್ರಯತ್ನ ಮಾಡುವುದಿಲ್ಲ, ಹಾಗೆಯೇ ಶರಣಯ ಹೆಸರಿನಡಿಯಲ್ಲಿ ವೇದಿಕೆ ಸೃಷ್ಟಿಸಿಕೊಂಡು ಅನ್ಯ ಮಾರ್ಗಕ್ಕೆ ದಾರಿಹುಡುಕಿಕೊಳ್ಳುತ್ತಾರೆ ಹೊರೆತು ಸಾಮಾಜಿಕ ಸುಧಾರಣೆ ಅಥವಾ ಪರವರ್ತನೆಗೆ ಶ್ರಮಿಸುವ ಕೆಲಸ ಮಾಡುವುದಿಲ್ಲ, ಇಂತಹ ಧೋರಣೆಗಳೆ ಹೆಚ್ಚುತ್ತಿರುವ ಈ ಪ್ರಸ್ತುತ ಸಂದರ್ಭದಲ್ಲಿ ಸಾಮಾಜಿಕ ಸಂಘಟನೆ ಅಭದ್ರತೆಗೆ ಕಾರಣವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಎಲ್ಲಾ ರಾಜಕಾರಣಿಗಳು ಕೆಟ್ಟವರಲ್ಲ, ಕೆಲವರು ಮಾತ್ರ ಕೆಟ್ಟವರಿದ್ದಾರೆ. ಅವರೊಂದಿಗೆ ಸೇರಿ ಮತ್ತಷ್ಟೊ ಕೆಡುವ ಪ್ರವೃತ್ತಿ ಹೆಚ್ಚುತ್ತಿದೆ. ಆದರೆ ಸುಧಾರಣೆಗೆ ಪ್ರಯತ್ನ ಮಾಡುವವರಿಲ್ಲ, ಒಳ್ಳೆಯ ನಡೆ ನುಡಿ, ಆಚಾರ ವಿಚಾರಗಳನ್ನು ಪರಿಪಾಲನೆ ಮಾಡುವ ಒಬ್ಬ ಸಾಮಾನ್ಯ ಮನುಷ್ಯನಾಗಿರಲಿ ಅಥವಾ ರಾಜಕಾರಣಿಯಾಗಿರಲಿ ಅವರಿಗೆ ಯಾವತ್ತಿದ್ದರೂ ಗೌರವ ದೊರೆಯುತ್ತದೆ ಎಂದು ಹೇಳಿದರು.

ಹಿರಿಯ ಸಾಹಿತಿ ಸಿದ್ಧರಾಮಸ್ವಾಮಿ ಹಿರೇಮಠ ಅವರು ರಚಿಸಿದ `ಅರಿವಿನ ಬದುಕು~ ಕೃತಿಯನ್ನು ಶಿವಗಂಗೆ ಗವಿಮಠದ ಮಲಯ ಶಾಂತಮುನಿ ಸ್ವಾಮೀಜಿಯವರು ಬಿಡುಗಡೆ ಮಾಡಿದರು. ಮಾಜಿ ಸಂಸದ ಬಸವರಾಜ ರಾಯರೆಡ್ಡಿ `ವಿದ್ಯಾಶ್ರೀ~ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.

ಚಳಗೇರಿ ಹಿರೇಮಠದ ವಿರೂಪಾಕ್ಷಲಿಂಗ ಸ್ವಾಮೀಜಿ, ಬೆದವಟ್ಟಿಯ ಶಿವಸಂಗಮೇಶ್ವರ, ಗುಲ್ಬರ್ಗಾದ ಮಹಾಂತ ಸ್ವಾಮೀಜಿ, ಎಮ್ಮಿಗನೂರಿನ ವಾಮದೇವ ಸ್ವಾಮೀಜಿ, ರೋಣದ ಗುರುಪಾದ ಸ್ವಾಮೀಜಿ, ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ, ಕುಷ್ಟಗಿಯ ಕರಿಬಸವ ಸ್ವಾಮೀಜಿ ಸೇರಿದಂತೆ ಅನೇಕರು ಹಾಜರಿದ್ದರು.

ಶರಣಪ್ಪ ಗಾಂಜಿ, ವಿರೂಪಾಕ್ಷಯ್ಯ ಗಂಧದ, ಸಿದ್ಧರಾಮೇಶ ಬೇಲೇರಿ, ಎಸ್.ಡಿ. ಅಪ್ಪಾಜಿ. ರೇವಣಪ್ಪ ಹಿರೇಕುರುಬರ, ಎಸ್.ಕೆ. ದಾನಕೈ ಹಾಗೂ ಅನೇಕರು ಇದ್ದರು. ಗಂಗಾಧರ ಕುರಟ್ಟಿ ನಿರೂಪಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.