ಗಂಗಾವತಿ: ಒಂದೇ ತಾಲ್ಲೂಕಿನ ಇಬ್ಬರು ಶಾಸಕರಾದ ಪರಣ್ಣ ಮುನವಳ್ಳಿ (ಗಂಗಾವತಿ) ಹಾಗೂ ಶಿವರಾಜ ತಂಗಡಗಿ (ಕನಕಗಿರಿ) ಅವರು ಆಡಳಿತದಲ್ಲಿ ಹಿಡಿತ ಸಾಧಿಸಬೇಕೆಂಬ `ಪ್ರತಿಷ್ಠೆ~ಯ ಜಿದ್ದಾಜಿದ್ದಿನ ಹಣಾಹಣಿಯಿಂದಾಗಿ ಕೇವಲ 48 ಗಂಟೆಯೊಳಗೆ ಇಲ್ಲಿನ ತಹಸೀಲ್ದಾರರು ಎತ್ತಂಗಡಿಯಾಗಿದ್ದಾರೆ.
ಇಲ್ಲಿದ್ದ ತಾಲ್ಲೂಕಿನ ಮೊದಲ ಮಹಿಳಾ ತಹಸೀಲ್ದಾರ ಖ್ಯಾತಿಯ ಸಿ.ಡಿ. ಗೀತಾ ಗುರುವಾರ ಕಾರವಾರದ ಹಳಿಯಾಳಕ್ಕೆ, ಶುಕ್ರವಾರ ಗದಗ ಜಿಲ್ಲೆಯ ರೋಣಕ್ಕೆ ಶನಿವಾರ ಮತ್ತೆ ಗಂಗಾವತಿ ತಾಲ್ಲೂಕಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ನೀಡಿತ್ತು. ಗಂಗಾವತಿಯ ತಹಸೀಲ್ದಾರ ಸ್ಥಾನಕ್ಕೆ ಗುಲ್ಬರ್ಗ ಜಿಲ್ಲೆಯ ಚಿಂಚೊಳ್ಳಿಯಲ್ಲಿ ತಹಸೀಲ್ದಾರ ಹಾಗೂ ಇದೇ ತಾಲ್ಲೂಕಿನವರಾದ ಅನ್ನದಾನಿ ಹನುಮಂತಪ್ಪ ಆಲೂರು ಎಂಬುವವರು ಶಾಸಕ ಪರಣ್ಣ ಅವರ ಮೂಲಕ ಇಲ್ಲಿಗೆ ವರ್ಗಾವಾಗಿ ಬಂದಿದ್ದರು ಎನ್ನಲಾಗಿದೆ.
ಆದರೆ ಶಾಸಕ ಶಿವರಾಜ ತಂಗಡಗಿ `ತಹಸೀಲ್ದಾರರ ವರ್ಗಾವಣೆ~ ಕಡತ ಹಿಡಿದು ನೇರ ಕಂದಾಯ ಖಾತೆ ಹೊಂದಿರುವ ಮುಖ್ಯಮಂತ್ರಿ ಸದಾನಂದಗೌಡ ಅವರ ಬಳಿಗೆ ತೆರಳಿ ಸಿ.ಡಿ. ಗೀತಾ ಅವರನ್ನು ಮತ್ತೆ ಗಂಗಾವತಿ ತಹಸೀಲ್ದಾರರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಅನ್ನದಾನಿ ಅವರ ವರ್ಗಾವಣೆಗೆ ಕಾರಣವೂ ಇತ್ತು. ನಿವೃತ್ತಿ ಅಂಚಿನಲ್ಲಿರುವ ಅವರ ಸೇವಾ ಅವಧಿ ಒಂದು ವರ್ಷವಷ್ಟೆ ಬಾಕಿಯಿದೆ. ಈ ಹಿನ್ನೆಲೆ `ಅಧಿಕಾರಿ ಇಚ್ಛಿಸಿದ ಸ್ಥಳಕ್ಕೆ ವರ್ಗಾವಣೆ~ ಮಾಡಿಸಿಕೊಳ್ಳುವ ಅವಕಾಶ ಬಳಸಿಕೊಂಡು ಇಲ್ಲಿಗೆ ಬಂದಿದ್ದರು.
ಆದರೆ ಶಾಸಕರಾದ ಮುನವಳ್ಳಿ ಮತ್ತು ತಂಗಡಗಿ ಮಧ್ಯದ ಜಿದ್ದಾಜಿದ್ದಿನ ರಾಜಕೀಯ ಕುಸ್ತಿಯಿಂದಾಗಿ ಗುರುವಾರಷ್ಟೆ ಇಲ್ಲಿಗೆ ವರ್ಗವಾಗಿದ್ದ ತಹಸೀಲ್ದಾರ ಎ.ಎಚ್. ಆಲೂರು 48 ಗಂಟೆಯೊಳಗೆ ಶುಕ್ರವಾರ ಎತ್ತಂಗಡಿಯಾಗಿದ್ದರು ಎಂದು ವಿಶ್ವಾಸನೀಯ ಮೂಲಗಳು `ಪ್ರಜಾವಾಣಿ~ಗೆ ದೃಢಪಡಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.