ADVERTISEMENT

ಸಂಗಣ್ಣ ಕರಡಿ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 9:40 IST
Last Updated 7 ಸೆಪ್ಟೆಂಬರ್ 2011, 9:40 IST

ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮಂಗಳವಾರ `ಪ್ರಜಾವಾಣಿ~ ಜೊತೆ ಮಾತನಾಡಿದ ಸಂಗಣ್ಣ ಕರಡಿ ಸೋಮವಾರವೇ ಈ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವುದಾಗಿ ಹೇಳಿದರು. ಚುನಾವಣೆಯಲ್ಲಿ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಬೇಕು ಎಂಬುದು ಕಡ್ಡಾಯವೇನಲ್ಲ. ಈ ವಿಷಯವನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಮನಕ್ಕೆ ತಂದು ಸಲಹೆ ಕೇಳಿದ್ದೆ. ಆದರೆ, ಈ ಉಭಯ ನಾಯಕರು ನಿರ್ಧಾರವನ್ನು ನನಗೇ ಬಿಟ್ಟಿದ್ದರು ಎಂದೂ ಸಂಗಣ್ಣ ಕರಡಿ ಸ್ಪಷ್ಟಪಡಿಸಿದರು.

ಆದರೆ, ಬಿಜೆಪಿಯ ಇನ್ನೊಂದು ಮೂಲದ ಪ್ರಕಾರ, ರಾಜೀನಾಮೆ ಸಲ್ಲಿಸುವ ನಿರ್ಧಾರದಲ್ಲೂ ಸಂಗಣ್ಣ ಕರಡಿ ಅವರ ರಾಜಕೀಯ ತಂತ್ರಗಾರಿಕೆ ಇದೆ ಎಂದು ಹೇಳಲಾಗುತ್ತಿದೆ.

ಯಾವುದಾದರೊಂದು ಸಚಿವ ಸ್ಥಾನ ಗಿಟ್ಟಿಸಿಕೊಳ್ಳಬೇಕು ಎಂಬುದು ಸಂಗಣ್ಣ ಕರಡಿ ಅವರ ಲೆಕ್ಕಾಚಾರ ಹಾಗೂ ಆಕಾಂಕ್ಷೆಯಾಗಿದೆ. ಇದು ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ ಸಂದರ್ಭದಲ್ಲಿಯೇ ನೆರವೇರಬೇಕಿತ್ತು. ಸಂಗಣ್ಣ ಕರಡಿ ಆಸೆಗೆ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ನೀರೆರೆದಿದ್ದರು. ಆದರೆ, ನಂತರದ ರಾಜಕೀಯ ಬದಲಾವಣೆ ಪರಿಣಾಮ ಸಂಗಣ್ಣ ಕರಡಿ ಅವರು ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷಗಿರಿಗೇ ತೃಪ್ತಿಪಡಬೇಕಾಯಿತು.

ಅದೂ ಅಲ್ಲದೇ, ಆಗಿನ ಸಂದರ್ಭದಲ್ಲಿ ಸಂಗಣ್ಣ ಕರಡಿ ಸಚಿವರಾಗುವುದಕ್ಕೆ ಜಿ.ಜನಾರ್ದನ ರೆಡ್ಡಿ ಸೇರಿದಂತೆ ಬಳ್ಳಾರಿ ಜಿಲ್ಲೆಯ ಸಚಿವರು ಅಡ್ಡಿಯಾಗಿದ್ದರು. ರೆಡ್ಡಿ ಸಹೋದರರ ಒಲವು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರ ಪರ ಇತ್ತು ಎಂಬುದನ್ನೂ ಬಿಜೆಪಿ ಮೂಲಗಳು ಒಪ್ಪಿಕೊಳ್ಳುತ್ತವೆ. ಆದರೆ, ಒಂದೆಡೆ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ನ್ಯಾಯಾಂಗ ಬಂಧನದಲ್ಲಿದ್ದರೆ, ಇತ್ತ, ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಯೂ ನಡೆಯುತ್ತಿದೆ.

ಈ ಉಪಚುನಾವಣೆಯಲ್ಲಿ ವಿಜೇತರಾದ ಪಕ್ಷದಲ್ಲಿ ಸಂಗಣ್ಣ ಕರಡಿ ಅವರು ಕ್ಷೇತ್ರದಲ್ಲಿನ ತಮ್ಮ ಪ್ರಭಾವ ಹಾಗೂ ಹಿಡಿತವನ್ನು ಸಾಬೀತು ಮಾಡಿದಂತಾಗುವ ಜೊತೆಗೆ, ಸಚಿವ ಸ್ಥಾನ ನೀಡುವಂತೆ ವರಿಷ್ಠರ ಮೇಲೆ ಒತ್ತಡ ಹೇರುವುದು ಸಹ ಈಗಿನ ರಾಜೀನಾಮೆಯ ಹಿಂದಿನ ತಂತ್ರಗಾರಿಕೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.