ADVERTISEMENT

ಸಂಚಿನ ಸುಳಿವು ‘ಮಂದಿರ್‌’ ಗೀತೆ ನಿಷೇಧ

ಗೀತೆಗೆ ಅವಕಾಶ: ಪೊಲೀಸರೊಂದಿಗೆ ಚಕಮಕಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 9:48 IST
Last Updated 18 ಮಾರ್ಚ್ 2014, 9:48 IST

ಗಂಗಾವತಿ: ‘ಮಂದಿರ್‌ ಬನಾಯೇಂಗೆ’ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗ­ಲಿದೆ. ಗೀತೆ ಹಾಕಿದರೆ ಓಕುಳಿ ಮೆರ­ವ­ಣಿಗೆಯಲ್ಲಿ ಒಂದು ಕೋಮಿನ ಯುವ­ಕರು ಗಲಭೆ ಎಬ್ಬಿಸಲು ಸಂಚು ರೂಪಿಸಿ­ದ್ದಾರೆ ಎಂದು ಸುಳಿವರಿತ ಪೊಲೀಸರು ಗೀತೆಗೆ ಜಿಲ್ಲಾಧಿಕಾರಿ ಮೂಲಕ ನಿಷೇಧ ಹೇರಿಸಿದ್ದರು ಎನ್ನುವುದು ಗೊತ್ತಾಗಿದೆ.

ಹೋಳಿ ಮೆರವಣಿಗೆಯಲ್ಲಿ ಉಂಟಾ­ಗಲಿರುವ ಗಲಭೆಯನ್ನೇ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಕೆಲ ರಾಜ­ಕಾರಣಿಗಳು ಹವಣಿಸುತ್ತಿದ್ದಾರೆ ಎಂಬ ಮಾಹಿತಿ ದೊರೆಯುತ್ತದ್ದಂತೆಯೆ ಇಲಾಖೆ ಎಚ್ಚೆತ್ತುಕೊಂಡಿದೆ ಎಂದು ಇಲಾಖೆಯ ಉನ್ನತಾಧಿಕಾರಿಯೊಬ್ಬರು ತಿಳಿಸಿದರು.

ಮೆರವಣಿಗೆಯಲ್ಲಿ ಸಾಮರಸ್ಯಕ್ಕೆ ಧಕ್ಕೆ­ಯಾಗುತ್ತಿದೆ. ಆ ಮೂಲಕ ಸಾರ್ವ­ಜ­ನಿಕ ಶಾಂತಿಗೆ ಭಂಗವಾಗಲಿದೆ ಎಂದ­ರಿತ ಪೊಲೀಸರು ಸೋಮವಾರದ ಮೆರ­ವಣಿಗೆ ಸುತ್ತ  ಸರ್ಪಗಾವಲು ಹಾಕಿದ್ದರು.

ಜಿಲ್ಲಾಧಿಕಾರಿ ನಿಷೇಧಿಸಿದ ಗೀತೆ ಹಾಕದಂತೆ ಎಚ್ಚರ ವಹಸಿದ್ದ ಪೊಲೀಸ್‌ ಇಲಾಖೆಯು, ಒಬ್ಬ ಕಾನ್‌ಸ್ಟೆಬಲ್‌  ಆರ್ಕೆಸ್ಟ್ರಾ ವಾಹನದಲ್ಲಿ ಡಿಜೆ ಪರಿಕರ ನಿರ್ವಾಹಕನ ಬಳಿ ಕಾವಲಿರಿಸಲಾಗಿತ್ತು.  ಪ್ರತಿ ಗೀತೆಯ ಮಾಹಿತಿಯನ್ನು ಕಾನ್‌­ಸ್ಟೆ­ಬಲ್‌ ಪಡೆಯುತ್ತಿದ್ದದ್ದು ಕಂಡು ಬಂತು.
ಗಂಗಾವತಿ ಉಪ ವಿಭಾಗದ ಇನ್‌ಸ್ಪೆಕ್ಟರ್‌ ವಿನ್ಸಂಟ್‌ ಶಾಂತಕುಮಾರ ಗಸ್ತು ನಿಯೋಜನೆಯ ನೇತೃತ್ವ ವಹಿಸಿ­ದ್ದರು. ಸಿಪಿಐಗಳಾದ ಆರ್‌.ಎಸ್‌. ಉಜ್ಜ­ನ­ಕೊಪ್ಪ ಕುಷ್ಟಗಿ ವೃತ್ತದ, ರಮೇಶ ಧರ್ಮಟ್ಟಿ ಗಂಗಾವತಿ ಗ್ರಾಮೀಣ, ಪಿಐಗಳಾದ ನಾಗಿರೆಡ್ಡಿ ಡಿಸಿಆರ್‌ಬಿ, ಕಾಳಿಕೃಷ್ಣ ನಗರಠಾಣೆ ಇದ್ದರು.

ಪಿಎಸ್‌ಐಗಳಾದ ಹನುಮರೆಡ್ಡಪ್ಪ ಡಿಸಿಆರ್‌ಬಿ, ಸಾಬಯ್ಯ ಗಂಗಾವತಿ ಗ್ರಾಮೀಣ, ವೀರಣ್ಣ ಮಾಗಿ ಕನಕಗಿರಿ, ನರಸಿಂಗಪ್ಪ ಸಂಚಾರಿ, ಉದಯರವಿ ಕಾರಟಗಿ, ಮೌನೇಶ ಹನುಮಸಾಗರ, ಸಂತೋಷ್‌ ತಾವರಗೇರಿ ಠಾಣೆಯಿಂದ ಬಂದೋಬಸ್ತ್‌ ವಹಿಸಿದ್ದರು.
ಮಾತಿನ ಚಕಮಕಿ: ಮಂದಿರ್‌ ಬನಾಯೇಂಗೆ ಗೀತೆಯನ್ನು ಹಾಕಲೇ ಬೇಕು ಎಂದು ಗಾಂಧಿವೃತ್ತದಲ್ಲಿ ಯುವ­ಕರು ಪಟ್ಟು ಹಿಡಿದರು. ನಿಷೇಧಿತ ಗೀತೆಗೆ ಅವಕಾಶವಿಲ್ಲ ಎಂದು ಪೊಲೀಸರೂ ಪಟ್ಟು ಹಿಡಿದರು.

ಕೆಲ ಸಂಘಟನೆಯ ಮುಖಂಡರು ಮಧ್ಯ ಪ್ರವೇಶಿಸಿ  ವಾತಾವರಣ ತಿಳಿಗೊ­ಳಿಸಿದರು. ‘ಮಂದಿರ್‌ ಬನಾಯೇಂಗೆ’ ಗೀತೆಗೆ ಅವಕಾಶ ನೀಡದಿದ್ದರೆ ಗಾಂಧಿ ವೃತ್ತದಿಂದ ಕದಲುವುದಿಲ್ಲ ಎಂದು ಯುವಕರ ಗುಂಪು ಪಟ್ಟುಹಿಡಿಯಿತು. ಬಳಿಕ ಅಧಿಕಾರಿಗಳು ಯುವಕರ ಮನವೊಲಿಸಿ ಮೆರವಣಿಗೆಯನ್ನು  ಮುನ್ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.