ADVERTISEMENT

ಸಮಾರಂಭ ಭಣಭಣ: ತಿರಂಗಾ ರಿಂಗಣ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2012, 8:00 IST
Last Updated 16 ಆಗಸ್ಟ್ 2012, 8:00 IST

ಕುಷ್ಟಗಿ:   ತಾಲ್ಲೂಕಿನ ಪಟ್ಟಲಚಿಂತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಸ್ವಾತಂತ್ರ್ಯೋತ್ಸವದಂದು ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಿದ ಘಟನೆ ಬೆಳಕಿಗೆ ಬಂದಿದೆ.

ಧ್ವಜ ತಿರುವುಮುರುವಾಗಿದ್ದನ್ನು ಗಮನಿಸಿದ ಸಾರ್ವಜನಿಕರು ಶಿಕ್ಷಕರ ಬೇಜವಾಬ್ದಾರಿಯನ್ನು ಆಕ್ಷೇಪಿಸಿದರಲ್ಲದೇ ತರಾಟೆಗೆ ತೆಗೆದುಕೊಂಡರು. ಬಳಿಕ ಸರಿಪಡಿಸಿ 2ನೇ ಬಾರಿ ಧ್ವಜಾರೋಹಣ ನೆರವೇರಿಸಿದರು.

ದೈಹಿಕ ಶಿಕ್ಷಕ ಕಟ್ಟಿದ ರಾಷ್ಟ್ರಧ್ವಜವನ್ನು ಎಸ್‌ಡಿಎಂಸಿ ಅಧ್ಯಕ್ಷ ಹನಮಂತಪ್ಪ ದಂಡಿನ ನೆರವೇರಿಸಿದಾಗ ಈ ಘಟನೆ ನಡೆದಿದೆ. ರಾಷ್ಟ್ರಧ್ವಜ ಏರಿಸುವಾಗ ಹಗ್ಗಕ್ಕೆ ಗಂಟು ಬಿದ್ದಿತ್ತು ನಂತರ ಸರಿಪಡಿಸಲಾಯಿತು ಎಂದು ಮುಖ್ಯಶಿಕ್ಷಕ ಶರಣಗೌಡ ಗೌಡರ್ ಹೇಳಿದರು.

ಗಂಟು: ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ನೆರವೇರಿಸಲಾಗಿದ್ದ ರಾಷ್ಟ್ರಧ್ವಜ ಕಂಬದ ಪಕ್ಕದಲ್ಲೇ ಇರುವ ದೂರವಾಣಿ ಕೇಬಲ್‌ನಲ್ಲಿ ಸಿಕ್ಕು ಗಂಟು ಬಿದ್ದಿತ್ತು. ಬಹಳಹೊತ್ತಿನವರೆಗೂ ಗಂಟು ಬಿದ್ದ ಸ್ಥತಿಯಲ್ಲೇ ಇದ್ದರೂ ಯಾರೂ ಗಮನಿಸಿರಲಿಲ್ಲ.

ಧ್ವಜಕ್ಕೂ ಬಡತನ: ಪಟ್ಟಣದ ಎಲ್ಲೆಂದರಲ್ಲಿ ತ್ರಿವರ್ಣ ಧ್ವಜಗಳು ಹಾರಾಡುತ್ತಿದ್ದರೆ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿನ ರಾಷ್ಟ್ರಧ್ವಜ ಕಳೆಗುಂದಿತ್ತು. ಸಣ್ಣ ಮತ್ತು ಬಣ್ಣಗೆಟ್ಟ ರಾಷ್ಟ್ರಧ್ವಜ ತೀರಾ ಹಳೆಯದಾಗಿತ್ತು. ಅದನ್ನು  ಸಾರ್ವಜನಿಕರುಆಕ್ಷೇಪಿಸಿದರು.

ಭಣಭಣ: ಪಟ್ಟಣದ ಜ್ಯೂನಿಯರ್ ಕಾಲೇಜ್ ಮೈದಾನದಲ್ಲಿ ನಡೆದ ಸಾರ್ವಜನಿಕ ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೆ ಬಹುತೇಕ ಪ್ರಮುಖರು ಹಾಜರಿರಲಿಲ್ಲ. ಶಾಸಕ ಅಮರೇಗೌಡ ಬಯ್ಯಾಪುರ ಅವರು ಅನಾರೋಗ್ಯ ಕಾರಣಕ್ಕೆ ಬಂದಿಲ್ಲ, ಹಾಗಾಗಿ ಬಹಳಷ್ಟು ಜನ ಬಂದಿಲ್ಲ ಎಂದು ಸಂಘಟಕರು ತಿಳಿಸಿದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಅವ್ಯವಸ್ಥೆ ಎದ್ದುಕಂಡಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.