ADVERTISEMENT

ಹನುಮಸಾಗರ: ಶ್ರೀಮದ್ಭಾಗವತ ಸಪ್ತಾಹ ಮಂಗಳ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 7:16 IST
Last Updated 6 ಏಪ್ರಿಲ್ 2013, 7:16 IST

ಹನುಮಸಾಗರ:  ಇಲ್ಲಿನ ರಾಘವೇಂದ್ರಸ್ವಾಮಿ ಮಠದಲ್ಲಿ ಕಳೆದ ಒಂದು ವಾರದಿಂದ ಜ್ಞಾನದಾಯಿನಿ ಪಾಠ ಶಾಲೆಯ ವತಿಯಿಂದ ಶ್ರೀಮದ್ಭಾಗವತ ಸಪ್ತಾಹ ಕಾರ್ಯಕ್ರಮ ನಡೆದಿದ್ದು ಶುಕ್ರವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಪ್ತಾಹ ಮಂಗಳವಾಯಿತು.

ಪಂಡಿತ ಪ್ರಮೋದಾಚಾರ ಪೂಜಾರ ಒಂದು ವಾರದವರೆಗೆ ಪ್ರವಚನ ನಡೆಸಿಕೊಟ್ಟಿದ್ದರು. ಈ ಸಪ್ತಾಹದಲ್ಲಿ ಭಗವದ್ಗೀತೆಯ 18 ಸಾವಿರ ಶ್ಲೋಕಗಳ ಪಾರಾಯಣ ಮಾಡಲಾಯಿತು.ವಿವಿಧ ಪಂಡಿತರಿಂದ ಪ್ರವಚನ,  ಹೋಮ, ಗೋವರ್ಧನ ಪೂಜೆ, ಗೋಪಾಳ ಕಾವಲಿ, ಗೋಪೂಜೆ, ಪುಷ್ಪಾರ್ಚನೆ, ದೀಪಾರಾಧನೆ, ಮಹಾಮಂಗಳಾರತಿ, ತೀರ್ಥಪ್ರಸಾದಗಳಂತಹ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಸಪ್ತಾಹ ಮಂಗಳ ಕಾರ್ಯಕ್ರಮದ ನಿಮಿತ್ತ ನಡೆದ ರಥೋತ್ಸವದಲ್ಲಿ ನೂರಾರು ಮಹಿಳೆಯರು ಕೋಲಾಟ, ಭಜನೆ, ನೃತ್ಯ ಪ್ರದರ್ಶಿಸಿದರು. ಈ ಸಪ್ತಾಹ ಕಾರ್ಯಕ್ರಮದ ನೇತೃತ್ವವಹಿಸಿಕೊಂಡಿದ್ದ ಪಂಡಿತ ಪ್ರಮೋದಾಚಾರ ಪೂಜಾರ ಬಳಿಕ ಪ್ರವಚನ ನೀಡಿದರು.

ಶ್ರೀಕರಾಚಾರ ಹೊಸಪೇಟೆ, ರಾಮಾಚಾರ ಗಂಗೂರ, ಧೀರೇಂದ್ರಾಚಾರ ಪೂಜಾರ, ರಾಮಾಚಾರ ಉಮರ್ಜಿ, ಬಿಂದಾಚಾರ ಜೋಶಿ, ಜಯತೀರ್ಥಾಚಾರ ಹುಂಡೆಕಾರ, ವಿನೋದಾಚಾರ ಗಲಗಲಿ, ಜಿತೇಂದ್ರಾಚಾರ ಬಳ್ಳಾರಿ, ಶ್ರೀನಿವಾಸಾಚಾರ ಋಗ್ವೇದಿ, ಶ್ರೀನಿವಾಸಾಚಾರ ಮಠದ, ಫಣಿರಾಮಾಚಾರ ಇವರನ್ನು ಸಪ್ತಾಹದ ಅಂಗವಾಗಿ ಸನ್ಮಾನಿಸಲಾಯಿತು. ಸಪ್ತಾಹದಲ್ಲಿ ಮಕ್ಕಳು ಕೃಷ್ಣ ಹಾಗೂ ಯಶೋಧೆಯ ವೇಷ ತೊಟ್ಟು ಕೃಷ್ಣನ ವಿವಿಧ ಲೀಲೆಗಳನ್ನು ನೃತ್ಯದ ಮೂಲಕ  ಪ್ರದರ್ಶಿಸಿದರು.

ಶುಕ್ರವಾರ ಬೆಳಿಗ್ಗೆ ಜ್ಞಾನದಾಯಿನಿ ಪಾಠಶಾಲೆಯಲ್ಲಿ ಜಪ, ಸಮಗ್ರ ಭಾಗವತದ ಹೋಮ, ಸಮಗ್ರ ಭಾಗವತದ ಪ್ರವಚನ, ಸಹಸ್ರ ನಾಮಾರ್ಚನೆ, ವಿವಿಧ ಭಜನಾ ಮಂಡಳಿಗಳಿಂದ ದೇವರ ಸಂಕೀರ್ತನೆ ಕಾರ್ಯಕ್ರಮಗಳು ಜರುಗಿದವು. ಮುಂಬಯಿ ಘನಶಾಮ ರಾಖೇ ಮತ್ತು ರಾಜಗೋಪಾಲ ಸಪ್ತಾಹದ ಸೇವೆ ಸಲ್ಲಿಸಿದರು. ಹನುಮಸಾಗರ, ಕುಷ್ಟಗಿ, ಇಳಕಲ್‌ಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು                  ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT