ಕೊಪ್ಪಳ: ಜಿಲ್ಲೆಯ ಕುಕನೂರು ತಾಲ್ಲೂಕಿನ ಮಾಳೇಕೊಪ್ಪ ಗ್ರಾಮದಲ್ಲಿ ಅಕ್ರಮವಾಗಿ ಗಂಧದ ಕಟ್ಟಿಗೆ, ನಾಡ ಬಂದೂಕು, ಜಿಂಕೆ ಚರ್ಮ ಇಟ್ಟುಕೊಂಡಿದ್ದ ಮೂವರು ಆರೋಪಿಗಳನ್ನು ಜಿಲ್ಲಾ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಮಾಳೆಕೊಪ್ಪ ಗ್ರಾಮದ ಶಿವಪ್ಪ ದೊಡ್ಡಶಿವಪ್ಪ ಹರಿಣಶಿಕಾರಿ, ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ತಿರ್ಲಾಪುರಗ್ರಾಮದ ಫಕೀರಪ್ಪ ಯಮನೂರಪ್ಪ ಹರಿಣಶಿಕಾರಿ ಹಾಗೂ ಗದಗ ಜಿಲ್ಲೆಯ ನರಸಾಪುರ ಗ್ರಾಮದ ಶೇಖಪ್ಪ ಮೋನಪ್ಪ ಬಂಧಿತರು.
ಮಾಳೇಕೊಪ್ಪದ ಶಿವಪ್ಪ ಎಂಬುವರ ಮನೆಯಲ್ಲಿ ಅಕ್ರಮವಾಗಿ 9 ಕೆ.ಜಿ ಗಂಧದ ಕಟ್ಟಿಗೆ, ಜಿಂಕೆ ಚರ್ಮ, ನಾಡ ಪಿಸ್ತೂಲ್ ಸೇರಿದಂತೆ ಜಿಂಕೆ ಸೆರೆ ಹಿಡಿಯಲು ಬಳಸುತ್ತಿದ್ದ ದೊಡ್ಡ ಹಾಗೂ ಸಣ್ಣ ಬಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇವರ ಅಕ್ರಮದ ಕುರಿತು ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿಯಲಬುರ್ಗಾ ಸಿಪಿಐ ಎಂ.ನಾಗರೆಡ್ಡಿ ನೇತೃತ್ವದಲ್ಲಿ ಕುಕನೂರು ಪೊಲೀಸ್ ಠಾಣೆ ಪಿಎಸ್ಐ ವೆಂಕಟೇಶ ಎನ್. ಹಾಗೂ ಸಿಬ್ಬಂದಿ ಮಲ್ಲೇಶಪ್ಪ, ಸೋಮಶೇಖರ, ಮಾರುತಿ, ಪ್ರಶಾಂತ್, ರವಿಶಂಕರ್, ವಿಠ್ಠಲ್ ಗೌಡರ, ಚಾಲಕ ಶರಣಪ್ಪ, ಬಸವರಡ್ಡಿನೇತೃತ್ವದ ತಂಡ ದಾಳಿ ಮಾಡಿ ವಶಪಡಿಸಿಕೊಂಡಿದೆ.
ಆರೋಪಿಗಳನ್ನು ಬಂಧಿಸುವಲ್ಲಿ ಸಹಕರಿಸಿದ ಪೊಲೀಸ್ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್ ಬಹುಮಾನ ಘೋಷಿಸಿ ಅಭಿನಂದಿಸಿದ್ದಾರೆ. ಡಿವೈಎಸ್ಪಿ ವೆಂಕಟಪ್ಪ ನಾಯಕ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.