ಹನುಮಸಾಗರ: ‘ಮರೆಯಾಗುತ್ತಿರುವ ಗ್ರಾಮೀಣ ಕಲೆಗಳನ್ನು ಉಳಿಸಿ, ಬೆಳೆಸುವಲ್ಲಿ ವಿವಿಧ ಕಲಾ ತಂಡಗಳು ಮತ್ತು ಗ್ರಾಮೀಣ ಕಲಾವಿದರು ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ’ ಎಂದು ಮಾಜಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ಮಾಲಗಿತ್ತಿ ಗ್ರಾಮದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಭಗೀರಥ ಶಿಕ್ಷಣ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಈಚೆಗೆ ಆಯೋಜಿಸಲಾಗಿದ್ದ ನಾಟಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
‘ಅನಾದಿ ಕಾಲದಿಂದಲೂ ಗ್ರಾಮಸ್ಥರಿಗೆ ರಂಜನೆ ನೀಡುತ್ತಿರುವ ನಾಟಕಗಳು, ಜನಪದಗಳು, ಲಾವಣಿಗಳು, ಬಯಲಾಟ, ದೊಡ್ಡಾಟ, ದಪ್ಪಿನಾಟಕ, ಶ್ರೀಕೃಷ್ಣ ಪಾರಿಜಾದಂತಹ ಕಲಾ ಪ್ರಕಾರಗಳು ನಿಧಾನಕ್ಕೆ ಕಣ್ಮರೆಯಾಗುತ್ತಿವೆ’ ಎಂದರು.
ಎಲ್ಲ ಕಲಾ ಪ್ರಕಾರಗಳು ಮರೆಯಾಗಲು ಟಿವಿ ಮುಖ್ಯ ಕಾರಣ. ಕಲಾಪ್ರಕಾರ ಉಳಿಸಿಕೊಂಡು ಕಲಾವಿ ದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವಕರು ಶ್ರಮಿಸಬೇಕು. ಈ ನಿಟ್ಟಿನಲ್ಲಿ ಅವರದ್ದು ಪ್ರಮುಖ ಪಾತ್ರವಿದೆ’ ಎಂದು ಅವರು ತಿಳಿಸಿದರು.
ಹಾಸ್ಯ ಕಲಾವಿದ ಜೀವನಸಾಬ ಬಿನ್ನಾಳ ಮಾತನಾಡಿದರು. ಜಮುರಾ ಸುತ್ತಾಟ ತಂಡದವರು ಶರಣಪಥ ಕ್ರಾಂತಿಪಥ ಹಾಗೂ ನವಿಲೂರ ನಿಲ್ದಾಣ ಎಂಬ ನಾಟಕಗಳನ್ನು ಪ್ರದರ್ಶಿಸಿದರು. ಹಾಸ್ಯ ಕಲಾವಿದ ಜೀವನಸಾಬ ಬಿನ್ನಾಳ ಜನಪದ ಪ್ರಸ್ತುತಪಡಿಸಿದರು
ತಾಪಂ ಸದಸ್ಯ ರಾವ್ಸಾಹೇಬ್ ದೇಸಾಯಿ ಅಧ್ಯಕ್ಷತೆವಹಿಸಿದ್ದರು. ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಪರಸಪ್ಪ ಗುಜಮಾಗಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಬಂಡರಗಲ್, ಪ್ರಮುಖರಾದ ದೇವೇಂದ್ರಪ್ಪ ತಳ್ಳಿಹಾಳ, ಬಸವರಾಜ ವಾಲಿಕಾರ, ನಾಗಪ್ಪ ತೆವರನ್ನವರ, ಕಲ್ಲಪ್ಪ ಕಂದಕೂರ, ಶರಣಗೌಡ ಪಾಟೀಲ, ಪಂಚಾಕ್ಷರಿ ಹಿರೇಮಠ, ಯಮನೂರಪ್ಪ ಹನುಮಸಾಗರ, ವೀರಯ್ಯ ಜ್ಯೋತಿ, ಶಿವಯ್ಯ ಗಡೇದಾರ, ದೇವೇಂದ್ರಪ್ಪ ದಂಡಿನ, ರಮೇಶ ಚವಾಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.