ADVERTISEMENT

ಅಳವಂಡಿ: ಸರ್ಕಾರಿ ಶಾಲೆಗೆ ಅಭಿವೃದ್ಧಿಯ ಸ್ಪರ್ಶ

ಅಳವಂಡಿ: ಹಲವಾಗಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 3:49 IST
Last Updated 5 ಸೆಪ್ಟೆಂಬರ್ 2021, 3:49 IST
ಅಳವಂಡಿ ಸಮೀಪದ ಹಲವಾಗಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಅಳವಂಡಿ ಸಮೀಪದ ಹಲವಾಗಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ   

ಅಳವಂಡಿ: ಹಿಂದುಳಿದ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಯನ್ನು ದಾನಿಗಳ ಸಹಾಯದಿಂದ ಖಾಸಗಿ ಶಾಲೆಯನ್ನು ಮೀರಿಸುವಂತೆ ಅಭಿವೃದ್ಧಿಪಡಿಸುವಲ್ಲಿ ಶಿಕ್ಷಕರು ಯಶಸ್ವಿಯಾಗಿದ್ದಾರೆ.

ಅಳವಂಡಿ ಸಮೀಪದ ಹಲವಾಗಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಮಕ್ಕಳನ್ನು ಕೈ ಬೀಸಿ ಕರೆಯುತ್ತಿದೆ. ಈ ಗ್ರಾಮವು ತಾಲ್ಲೂಕು ಕೇಂದ್ರದಿಂದ 30 ಕಿ.ಮೀ ದೂರದಲ್ಲಿದೆ. ಇಲ್ಲಿ ದಾನಿಗಳ ಸಹಾಯ ಹಾಗೂ ಶಿಕ್ಷಕರ ಆಸಕ್ತಿ, ಕ್ರಿಯಾಶೀಲತೆ ಹಾಗೂ ಗ್ರಾಮಸ್ಥರ ಸಹಕಾರದಿಂದ ಮಾದರಿ ಶಾಲೆ ನಿರ್ಮಾಣವಾಗಿದೆ.

ಶಾಲೆಯಲ್ಲಿ ವಿವಿಧ ಸೌಕರ್ಯ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸುಸಜ್ಜಿತ ಅಡುಗೆ ಕೊಠಡಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ,ಸುಸಜ್ಜಿತ ಗ್ರಂಥಾಲಯ, ಶೌಚಾಲಯ, ಕಚೇರಿ ಕೊಠಡಿ, ತರಗತಿ ಕೊಠಡಿ ಇವೆ. ಕೊಠಡಿಗಳಲ್ಲಿ ಫ್ಯಾನ್ ವ್ಯವಸ್ಥೆ ಹಾಗೂ ಸ್ಮಾರ್ಟ್ ಕ್ಲಾಸ್‌ಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಸೋಲಾರ್ ವ್ಯವಸ್ಥೆ, ವಿಜ್ಞಾನಿಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಕೊಡುಗೆ, ಮೈಕ್ ವ್ಯವಸ್ಥೆ ಹಾಗೂ ಹಲವು ಸೌಕರ್ಯಗಳನ್ನು ದಾನಿಗಳು ಕಲ್ಪಿಸಿದ್ದಾರೆ.

ADVERTISEMENT

ಇಲ್ಲಿನ ಆಡಳಿತ ಮಂಡಳಿ, ಶಿಕ್ಷಕರು 2014 ರಿಂದ 2021ರ ವರೆಗೆ ದಾನಿಗಳ ನೆರವಿನಿಂದ ಸುಮಾರು ₹7 ಲಕ್ಷ ವೆಚ್ಚದಲ್ಲಿ ಹಲವು ಸೌಕರ್ಯಗಳನ್ನು ಕಲ್ಪಿಸಿದ್ದಾರೆ.

ಶಿಕ್ಷಕರು ಪಾಠ ಹೇಳುವ ಜೊತೆಗೆ ಮಕ್ಕಳಿಗೆ ಯೋಗಾಭ್ಯಾಸ, ಧ್ಯಾನ, ಪ್ರಾರ್ಥನೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ವಾರಕ್ಕೊಮ್ಮೆ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸುತ್ತಾರೆ. ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿ ಬಗ್ಗೆ ಅರಿವು ಮೂಡಿಸಲು ಆಗಾಗ ಜಲ ಸಂರಕ್ಷಣೆ, ವನ ಮಹೋತ್ಸವ ಕಾರ್ಯಕ್ರಮ ನಡೆಸುತ್ತಾರೆ.

ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ ಒಟ್ಟು 176 ವಿದ್ಯಾರ್ಥಿಗಳು, 7 ಜನ ಶಿಕ್ಷಕರು ಇದ್ದಾರೆ. ಶಾಲಾ ಆವರಣದಲ್ಲಿ ರಾಷ್ಟ್ರಕವಿ ಕುವೆಂಪು ಸಾಂಸ್ಕೃತಿಕ ವೇದಿಕೆ ಇದೆ. ವಿವಿಧ ಗಿಡ-ಮರಗಳನ್ನು ಬೆಳೆಸಲಾಗಿದೆ.

ಆನ್‌ಲೈನ್ ತರಬೇತಿ: ಕೋವಿಡ್ ಕಾರಣ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯಬಾರದು ಎಂಬ ಉದ್ದೇಶದಿಂದ ಶಿಕ್ಷಕರು ಇಲ್ಲಿನ ಮಕ್ಕಳಿಗೆ ಆನ್‌ಲೈನ್ ಶಿಕ್ಷಣವನ್ನೂ ನೀಡುತ್ತಿದ್ದಾರೆ.

ಇನ್ನು ಹೆಚ್ಚಿನ ರೀತಿಯಲ್ಲಿ ಶಾಲೆಗೆ ದಾನಿಗಳ ಸಹಾಯ ನೀಡಿದರೆ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವ್ಯವಸ್ಥೆ, ಅಭ್ಯಾಸ ಕೊಠಡಿಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಶಿಕ್ಷಕರಾದ ವೆಂಕರಡ್ಡಿ ಇಮ್ಮಡಿ , ಮಂಜುನಾಥ ಕೇಸಲಾಪುರ, ಯಮನೂರಸಾಬ, ವೀರಪ್ಪ ಕಂಬಳ್ಯಾಳ, ಚನ್ನಮ್ಮ ನಾಗರಹಳ್ಳಿ, ಲಕ್ಷ್ಮಣಕುಮಾರ ಹೇಳುತ್ತಾರೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.