ಯಲಬುರ್ಗಾ: ‘ಮನೆಯಲ್ಲಿನ ಬಳಕೆಯಾಗದೇ ಇರುವ ಉತ್ತಮ ಪುಸ್ತಕಗಳನ್ನು ಹಾಳು ಮಾಡದೆ ಜೋಳಿಗೆಗೆ ಹಾಕಬೇಕು’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೋಮಪ್ಪ ಪೂಜಾರ ಮನವಿ ಮಾಡಿದರು.
ತಾಲ್ಲೂಕಿನ ಹಿರೇಅರಳಿಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಓದುವ ಬೆಳಕು ಕಾರ್ಯಕ್ರಮದ ಅಡಿ ನಡೆದ ಪುಸ್ತಕ ಜೋಳಿಗೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪುಸ್ತಕಗಳು ವಿದ್ಯಾರ್ಥಿಗಳ ಉಜ್ಜಲ ಭವಿಷ್ಯ ರೂಪಿಸುತ್ತವೆ. ಗ್ರಾಮೀಣ ಭಾಗದ ಅನೇಕ ಕಡೆಗಳಲ್ಲಿ ಪುಸ್ತಕಗಳು ಸಿಗದೇ ಓದುಗರು ನಿರಾಸೆಗೊಳ್ಳುತ್ತಿದ್ದಾರೆ ಎಂದರು.
ಕೋವಿಡ್-19 ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದ್ದು, ಶಾಲಾ ಮಕ್ಕಳಲ್ಲಿ ಓದುವ ಹವ್ಯಾಸ ಕ್ಷೀಣಿಸುತ್ತಿದೆ. ಈ ಕಾರಣ ಮಕ್ಕಳಲ್ಲಿ ಓದುವ ಹವ್ಯಾಸ ಅಭಿವೃದ್ಧಿಗೊಳಿಸಬೇಕಾಗಿದೆ. ಗ್ರಂಥಾಲಯಗಳಲ್ಲಿ ಶಾಲಾ ಮಕ್ಕಳು ಉಚಿತ ಹೆಸರು ನೋಂದಾಯಿಸಿಕೊಳ್ಳುವ ಮೂಲಕ
ಅವರ ಓದುವ ಹವ್ಯಾಸ ಹೆಚ್ಚಿಸಬಹುದು. ಅದಕ್ಕಾಗಿ ಪುಸ್ತಕಗಳನ್ನು ಹಾಳು ಮಾಡದೆ ಮನೆಬಾಗಿಲಿಗೆ ಬಂದ ಜೋಳಿಗೆಗೆ ಪುಸ್ತಕ ಹಾಕಿರಿ
ಎಂದು ಹೇಳಿದರು.
ಪ್ರೌಢಶಾಲೆ ಮುಖ್ಯಶಿಕ್ಷಕ ನಾಗಭೂಷಣ ಚಿನಿವಾಲರ ಮಾತನಾಡಿದರು.
ಮಾಟರಂಗಿಯ ಹನುಮಂತಗೌಡ ಪಾಟೀಲ, ಲಿಂಗನಬಂಡಿ ಶಾಲೆಯ ಲಿಂಗಪ್ಪ ಹಡಪದ, ಗ್ರಂಥಾಲಯದ ಮೇಲ್ವಿಚಾರಕ ಪ್ರವೀಣಕುಮಾರ, ಎಲ್ಲಾ ಶಾಲೆಯ ಸಹ ಶಿಕ್ಷಕರು, ಶಿಕ್ಷಕಿಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಗ್ರಾ.ಪಂ ಸಿಬ್ಬಂದಿ
ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.