ಗಂಗಾವತಿ: ‘ಇತ್ತೀಚೆಗೆ ಯುವಕರು ದುಶ್ಚಟಗಳಿಗೆ ದಾಸರಾಗಿ, ಜೀವನ ಹಾಳು ಮಾಡಿಕೊಳ್ಳುತ್ತಿದ್ದು, ಇದರಿಂದ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಯುವಕರು ಕುಟುಂಬ ನಿರ್ವಹಣೆ, ಜವಾಬ್ದಾರಿ, ಪಾಲಕರ ಕಷ್ಟ ಅರಿತು, ಉಜ್ವಲ ಜೀವನ ರೂಪಿಸಿಕೊಳ್ಳುವತ್ತ ಚಿತ್ತ ಹರಿಸಬೇಕು’ ಎಂದು ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ ಹೇಳಿದರು.
ನಗರದ ಕೃಷ್ಣದೇವರಾಯ ವೃತ್ತದಲ್ಲಿ ಗುರುವಾರ ಪೊಲೀಸ್ ಇಲಾಖೆ, ಗೋಗ್ರಿನ್ ಸೈಕ್ಲಿಂಗ್, ಭಾರತೀಯ ವೈದ್ಯಕೀಯ ಸಂಘ, ಸೇಂಟ್ ಪಾಲ್ಸ್ ಡಿ-ಫಾರ್ಮಸಿ ಕಾಲೇಜು ಸಹಯೋಗದಲ್ಲಿ ಮಾದಕ ವಸ್ತುಗಳ ಬಳಕೆ ವಿರೋಧಿ ದಿನದಲ್ಲಿ ಭಾಗವಹಿಸಿ ಮಾತನಾಡಿದರು.
‘ಮಾದಕ ವಸ್ತುಗಳ ದಾಸರಾದರೆ, ಹೊರಬರುವುದು ಕಷ್ಟ. ಪಾರ್ಟಿ, ಶೋಕಿ, ಇವೆಂಟ್ ನೆಪದಲ್ಲಿ ಸಿಗರೇಟ್, ಗುಟ್ಕಾ, ಮದ್ಯ, ಗಾಂಜಾ, ಚರಸ್ ಸೇವನೆಗೆ ಮುಂದಾದರೆ, ಮುಂದೆ ನರಕದ ಜೀವನ ಕಟ್ಟಿಟ್ಟ ಬುತ್ತಿ. ಇಂತಹ ದುಶ್ಚಟಗಳು ಕಾನೂನುಬಾಹಿರ. ಹಾಗಾಗಿ ಯುವಕರು ದುಶ್ಚಟಗಳಿಂದ ದೂರವಿರಬೇಕು’ ಎಂದರು.
ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಎ.ಎಸ್.ಎನ್.ರಾಜು ಮಾತನಾಡಿ, ಯುವ ಸಮೂಹ ದುಶ್ಚಟಗಳಿಗೆ ಅಂಟಿಕೊಂಡು, ಜೀವನಹಾಳು ಮಾಡಿಕೊಳ್ಳುತ್ತಿದ್ದಾರೆ. ಡ್ರಗ್ಸ್ ಬಳಸುವ ಯುವಕ, ಯುವತಿಯರು ಸಾರ್ವಜನಿಕ ಪ್ರದೇಶದಲ್ಲಿ ಪ್ರಜ್ಞೆ ಕಳೆದುಕೊಂಡು ಮಾನ ಹರಾಜು ಮಾಡಿಕೊಂಡು, ಕುಟುಂಬಕ್ಕೆ ಕೆಟ್ಟಹೆಸರು ತರುತ್ತಿದ್ದಾರೆ. ಮಾದಕ ವಸ್ತುಗಳ ತಡೆಗೆ ಎಲ್ಲರೂ ಜಾಗೃತರಾಗಬೇಕು. ಅಡಿಕ್ಸನ್ ಸೆಂಟರ್ಗಳಿಗೆ ತೆರಳಿ ಚಿಕಿತ್ಸೆ ಪಡೆಯುವಂತೆ ತಿಳಿಸಿದರು.
ನಂತರ ಜಾಗೃತಿಗಾಗಿ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಫ್ಲೈಯಿಂಗ್ ಫೆದರ್ಸ್, ವಿಜಯನಗರ ಸ್ಪೋರ್ಟ್ಸ್ ಕ್ಲಬ್, ಲಯನ್ಸ್ ಕ್ಲಬ್, ಗಂಗಾವತಿ ಚಾರಣ ಸಂಘ, ಕಿಷ್ಕಿಂದ ಯುವಚಾರಣ ಬಳಗ, ಪರಿಸರ ಸೇವಾ ಟ್ರಸ್ಟ್ ಸೇರಿದಂತೆ ಹಲವು ಸಂಘಟನೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.
ನಗರ ಪೊಲೀಸ್ ಠಾಣೆಯ ಪಿಐ ಪ್ರಕಾಶ್ ಮಾಳಿ, ಐಎಂಎ ಕಾರ್ಯದರ್ಶಿ ಡಾ.ನಾಗರಾಜ, ಅಭಿಷೇಕ, ಅರವಿಂದಗೌಳಿ, ಡಾ.ಅಮರ ಪಾಟೀಲ, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಶಿವಕುಮಾರ ಮಾಲಿ ಪಾಟೀಲ, ಸೇಂಟ್ ಪಾಲ್ಸ್ ಡಿ-ಫಾರ್ಮಸಿ ಕಾಲೇಜಿನ ಸರ್ವೇಶ್ ವಸ್ತ್ರದ್, ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ವೆಂಕಟೇಶ ರಾಠೋಡ, ಸಂಚಾರಿ ಠಾಣೆ ಪಿಎಸ್ಐ ಶಾರದಮ್ಮ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.