ADVERTISEMENT

ಕೊಪ್ಪಳ: ಮುಸ್ಲಿಂ ವ್ಯಾಪಾರಿಗಳ ವಿರುದ್ಧ ಆಕ್ರೋಶ: ದೂರು

‘ಮಧುಗಿರಿ ಮೋದಿ’ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 6:07 IST
Last Updated 3 ಅಕ್ಟೋಬರ್ 2021, 6:07 IST
ಮಧುಗಿರಿ ಮೋದಿ
ಮಧುಗಿರಿ ಮೋದಿ   

ಕೊಪ್ಪಳ: ಗಂಗಾವತಿ ತಾಲ್ಲೂಕಿನ ಅಂಜನಾದ್ರಿಗೆ ಶುಕ್ರವಾರ ಭೇಟಿ ನೀಡಿದ್ದತುಮಕೂರಿನ ಹಿಂದೂಪರ ಕಾರ್ಯಕರ್ತ ‘ಮಧುಗಿರಿ ಮೋದಿ’ ಅಲಿಯಾಸ್ ಅತುಲ್‌ಕುಮಾರ್ ಸಬರವಾಲ್, ಮುಸ್ಲಿಂ ವ್ಯಾಪಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿ ಬಿಟ್ಟಿದ್ದಕ್ಕೆಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

ಆಂಜನೇಯನ ದರ್ಶನಕ್ಕೆ ಬಂದಿದ್ದ ಅವರು, ‘ಹಿಂದೂ ಧರ್ಮದ ಮೇಲೆ ನಂಬಿಕೆ ಇಡದ, ಜೈ ಶ್ರೀರಾಮ್ ಹೇಳದ ಮುಸ್ಲಿಮರು ಇಲ್ಲಿ ವ್ಯಾಪಾರ ನಡೆಸುತ್ತಿರುವುದು ಖಂಡನೀಯ, ಬೇಗ ಜಾಗ ತೆರವುಗೊಳಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಕೂಗಾಡಿದ್ದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿಹಾಕಿದ್ದರು.

‘ಇಲ್ಲಿ ಅನ್ಯ ಧರ್ಮಿಯರು ಅಂಗಡಿಗಳನ್ನು ನಡೆಸುವಂತಿಲ್ಲ. ಇಲ್ಲಿಂದ ಕೂಡಲೇ ಅಂಗಡಿ ಮುಂಗಟ್ಟುಗಳನ್ನು ಎತ್ತಿಕೊಂಡು ಹೋಗಬೇಕು. ಮುಂದಿನ ದಿನಗಳಲ್ಲಿ ನಾನು ಇಲ್ಲಿಗೆ ಬಂದಾಗ ಮುಸ್ಲಿಮರ ಅಂಗಡಿಗಳು ನನ್ನ ಕಣ್ಣಿಗೆ ಕಾಣಬಾರದು’ ಎಂದು ಬೆದರಿಕೆ ಹಾಕಿದ್ದರು.

ADVERTISEMENT

ವಿವಿಧ ಸಂಘಟನೆಗಳವರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಸ್ಥಳಕ್ಕೆತಹಶೀಲ್ದಾರ್ ಯು.ನಾಗರಾಜ ತೆರಳಿ ಪರಿಶೀಲನೆ ನಡೆಸಿದರು. ಅಷ್ಟೊತ್ತಿಗೆ ಅವರು ಬೇರೆಡೆಗೆ ತೆರಳಿದ್ದರು. ನಂತರ ತಹಶೀಲ್ದಾರ್ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೋಮು ವೈಷಮ್ಯ ಬಿತ್ತಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಮಧುಗಿರಿ ಮೋದಿ’ಯನ್ನು ಇನ್ನೂ ಬಂಧಿಸಿಲ್ಲ ಎಂದುತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.