ಕೊಪ್ಪಳ: ಯೇಸುಕ್ರಿಸ್ತನ ಜನ್ಮದಿನದ ಅಂಗವಾಗಿ ಜಿಲ್ಲೆಯ ವಿವಿಧೆಡೆ ಬುಧವಾರ ಕ್ರಿಸ್ಮಸ್ ಅನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ನಗರದಲ್ಲಿ ವಿವಿಧ ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ನಂತರ ಕೇಕ್ ಕತ್ತರಿಸಿ ಎಲ್ಲರಿಗೆ ವಿತರಿಸಲಾಯಿತು. ಕ್ರಿಸ್ತನ ಸಂದೇಶಗಳ ಕುರಿತು ಪ್ರವಚನ ಮತ್ತು ಗೀತ ಗಾಯನ ಕಾರ್ಯಕ್ರಮ ನಡೆಯಿತು.
ಮುನಿರಾಬಾದ್ ಹಾಗೂ ನಗರದ ಇಸಿಐ ಚರ್ಚ್ನಲ್ಲಿ ನಡೆದ ಕ್ರಿಸ್ಮಸ್ ಹಬ್ಬದ ಸಂಭ್ರಮಾಚರಣೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಪಾಲ್ಗೊಂಡು, ಕ್ರೈಸ್ತ ಸಮುದಾಯದವರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು.
ಬಳಿಕ ಮಾತನಾಡಿದರ ಅವರು,‘ಶಾಂತಿ, ಸಹನೆ, ಸತ್ಕಾರ್ಯ ಮತ್ತು ಸೂವಿಚಾರಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕ್ಷಮಾ ಗುಣ ಪ್ರೀತಿಯ ಸಂಕೇತವಾಗಿದೆ. ವಿಶ್ವಮಾನವ ತತ್ವವನ್ನು ಪ್ರತಿಪಾದಿಸಿದ ಯೇಸು ಪ್ರಭು, ನಾವೆಲ್ಲರೂ ಒಂದೇ, ಎಲ್ಲರನ್ನು ಪ್ರೀತಿಸೋಣಾ ದ್ವೇಷ, ಅಸೂಯೇ, ಅಹಂಕಾರದಿಂದ ಮನುಷ್ಯ ತನ್ನ ಮನುಷ್ಯತ್ವ ಕಳೆದುಕೊಳ್ಳುತ್ತಾನೆ ಎಂದರು.
ಸದಾ ತಾಳ್ಮೆಯಿಂದ ವರ್ತಿಸಿ, ಸೌರ್ಹಾದತೆ ಸಹಬಾಳ್ವೆಗೆ ಕೈಜೋಡಿಸಬೇಕು. ತಾನು ಮಾಡುವ ಕರ್ಮದಿಂದ ಮನುಷ್ಯನು ಈ ಜಗತ್ತಿಗೆ ಪರಿಚಯಗೊಳ್ಳುವನು. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯು ಧಾರ್ಮಿಕ ವಿಚಾರಗಳನ್ನು ಹೊಂದಿ, ಸದಾಚಾರದಿಂದ ಜೀವನ ನಡೆಸಿದಾಗ ಮಾತ್ರ ಯೇಸು ಅವರ ತತ್ವಪಾಲಿಸಿದಂತಾಗುತ್ತದೆ. ಮಾನವ ಕುಲದ ಏಳ್ಗೆಗಾಗಿ ತಾವು ಶಿಲುಬಿಗೆ ಏರಿ ಅಮರರಾದ ಯೇಸು ಪ್ರಭು ಅವರ ಜೀವನ ಆದರ್ಶಗಳನ್ನು ಪ್ರತಿಯೊಬ್ಬರೂ ಚಾಚು ತಪ್ಪದೇ ಪಾಲಿಸಬೇಕು ಎಂದು ಕರೆ
ನೀಡಿದರು.
ಕುಷ್ಟಗಿ ರಸ್ತೆಯ ಸೇಂಟ್ ಫ್ರಾನ್ಸಿಸ್ ಚರ್ಚ್ನಲ್ಲಿ ಫಾದರ್ ಸೆಬಾಸ್ಟಿಯನ್ ಧರ್ಮಸಂದೇಶ ನೀಡಿದರು. ಕಲ್ವಾರಿ, ಚಾಪೆಲ್ ಟ್ರಸ್ಟ್, ಕ್ರೈಸ್ತ ಜ್ಯೋತಿ ಟ್ರಸ್ಟ್ಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಫಾದರ್ ರವಿಕುಮಾರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್, ನಗರಸಭೆ ಸದಸ್ಯರಾದ ಅರುಣ ಅಪ್ಪುಶೆಟ್ಟಿ, ಅಕ್ಬರ್ಪಾಷಾ ಪಲ್ಟನ್, ಅಮರೇಶ ಉಪಲಾಪೂರ, ಯಂಕಪ್ಪ ಹೊಸಳ್ಳಿ, ಚಂದ್ರು ಭಾಗ್ಯನಗರ, ರಮೇಶ ಹೂಗಾರ, ಸದಾನಂದ ಭಾವಿಮನಿ, ದೇವೀಂದ್ರಪ್ಪ, ಶ್ಯಾಮಸುಂದರ್, ಸ್ಯಾಮೇಲ್, ಸ್ಯಾಮಸನ್ ಹಾಗೂ ಪರಶುರಾಮ ಭಾಗ್ಯನಗರಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.