ತಾವರಗೇರಾ: ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ವಿಶೇಷ ಹಾಗೂ ವಿನೂತನ ತಂತ್ರಜ್ಞಾನದ ಸ್ಮಾರ್ಟ್ಕ್ಲಾಸ್, ಬನಸಿರಿ ಕಾರ್ಯಕ್ರಮ ಪುಸ್ತಕ ಬಿಡುಗಡೆ, ಮಕ್ಕಳಿಂದ ವಿವಿಧ ಚಟುವಟಿಕೆಗಳು ಏರ್ಪಡಿಸಿದ್ದು ಶ್ಲಾಘನೀಯ. ಇದಕ್ಕೆ ಗ್ರಾಮಸ್ಥರು ಮತ್ತು ಇಲಾಖೆ ಅಧಿಕಾರಿಗಳು, ಯುವಕರ ಬಳಗದ ಶ್ರಮವೇ ಕಾರಣ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ಸಮೀಪದ ವಿರುಪಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ‘ಗೆಲುವಿನ ಹೆಜ್ಜೆ’ ಕಾರ್ಯಕ್ರಮ ಹಾಗೂ ‘ಗುರುವಿಗೆ ಗುರು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮುದಾಯ ಭಾಗವಹಿಸುವಿಕೆ, ಪೋಷಕರ ಸಹಕಾರ ಇಲ್ಲದೇ ಯಾವ ಯೋಜನೆ ಹಾಗೂ ಕಾರ್ಯಕ್ರಮ ಯಶಸ್ವಿಯಾಗುವದಿಲ್ಲ. ಅದರಂತೆ ಸ್ಥಳೀಯ ಸ್ವಾಮಿ ವಿವೆಕಾನಂದ ಯುವಕ ಬಳಗ , ಎಸ್ಡಿಎಂಸಿ ಮತ್ತು ಗ್ರಾಮಸ್ಥರು ಶಾಲೆ ಅಭಿವೃದ್ಧಿ, ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಿರುವದು ಮಾದರಿಯಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ,ಶಿಕ್ಷಕರು ಸಹ ವಿವಿಧ ಚಟುವಟಿಕೆಗಳನ್ನು ಆಯೋಜನೆ ಮಾಡಿ, ಮಕ್ಕಳ ಭವಿಷ್ಯಕ್ಕೆ ಮುನ್ನುಡಿ ಬರೆದಿದ್ದಾರೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮಾತನಾಡಿ, ಇಂತಹ ವಿಶೇಷ ಕಾರ್ಯಕ್ರಮ ಆಯೋಜನೆ ಮತ್ತು ಸಮುದಾಯದ ಸಹಕಾರಕ್ಕೆ ಮೇಣೆಧಾಳ ಸಂಪನ್ಮೂಲ ವ್ಯಕ್ತಿ ಶರಣಪ್ಪ ತುಮರಿಕೊಪ್ಪ ಅವರ ಶ್ರಮ ಇದೆ. ಶಾಲೆಯ ಸಿಬ್ಬಂದಿ ಹಗಲಿರುಳು ಮಕ್ಕಳ ವಿಶೇಷ ಬೋಧನೆಗಳಿಗೆ ಪೂರಕ ವಾತವರಣ ನಿರ್ಮಾಣಕ್ಕೆ ಕಾರಣ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಶರಣಪ್ಪ ತುಮರಿಕೊಪ್ಪ ಮಾತನಾಡಿದರು. ಮುಖ್ಯಶಿಕ್ಷಕ ಶರಣಪ್ಪ ತಂಬ್ರಳ್ಳಿ, ಸ್ಥಳಿಯ ವಿವೇಕಾನಂದ ಯುವಕ ಬಳಗ, ಎಸ್ಡಿಎಂಸಿ ಪದಾಧಿಕಾರಿಗಳು, ಗ್ರಾಮದ ಮುಖಂಡರು, ಸ್ಥಳಿಯ ಗ್ರಾಪಂ ಸದಸ್ಯರು, ಶಿಕ್ಷಕರು ಇದ್ದರು.
ಹನಮಂತಪ್ಪ ಎಸ್ ನಿರೂಪಿಸಿದರು. ಸೋಮನಾಥ ಗೋಟೂರು ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.