ಕುಷ್ಟಗಿ: ಪೆಟ್ರೋಲ್ ದರ ಹೆಚ್ಚಳ ಖಂಡಿಸಿ ಇಲ್ಲಿಯ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಕಾರ್ಯಕರ್ತರು ಶುಕ್ರವಾರ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ತಿಕೋಟಿಕರ್ ಪೆಟ್ರೋಲ್ ಬಂಕ್ನಲ್ಲಿ ಪ್ರತಿ ಲೀಟರ್ಗೆ ₹100 ದರ ಇತ್ತು. ಕಾಂಗ್ರೆಸ್ ಪಕ್ಷದ ಸೂಚನೆಯಂತೆ ಬಂಕ್ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಮುಖಂಡರು ವಾಹನಗಳಿಗೆ ಇಂಧನ ಭರ್ತಿ ಮಾಡಿಕೊಳ್ಳಲು ಬರುವ ಗ್ರಾಹಕರಿಗೆ ಸಿಹಿ ಹಂಚುವ ಮೂಲಕ ಪರೋಕ್ಷವಾಗಿ ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿ ಕೇಂದ್ರದ ಎನ್ಡಿಎ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅಧ್ಯಕ್ಷ ಮಂಜುನಾಥ ಕಟ್ಟಿಮನಿ, ಇತರೆ ಪ್ರಮುಖರು,‘ಪೆಟ್ರೋಲ್, ಡಿಸೇಲ್ ಬೆಲೆ ನಿತ್ಯವೂ ಹೆಚ್ಚುತ್ತಿದ್ದು, ಇದು ಸರಕು ಸಾಗಣೆ ವ್ಯವಸ್ಥೆಯ ಮೇಲೆ ಹೆಚ್ಚಿನ ಪರಿಣಾಮ ಉಂಟುಮಾಡಿದೆ. ಇದರಿಂದ ಅಗತ್ಯವಸ್ತುಗಳ ಬೆಲೆ ಹೆಚ್ಚುತ್ತಿದೆ. ಅಂತಿಮವಾಗಿ ಇದರ ಹೊರೆ ಜನಸಾಮಾನ್ಯರೇ ಹೊರುವಂತಾಗಿದೆ. ತೈಲ ಬೆಳೆ ಹೆಚ್ಚಿಸುವ ಮೂಲಕ ಬಡವರ ಹೊಟ್ಟೆಯ ಮೇಲೆ ಕೇಂದ್ರ ಸರ್ಕಾರ ಬರೆ ಎಳೆಯುತ್ತಿದೆ. ಕೊರೊನಾ ಸಮಸ್ಯೆಯಿಂದ ಜರ್ಝರಿತರಾಗಿರುವ ಜನ ಈಗ ಇಂಧನ ದರ ಹೆಚ್ಚಳದಿಂದ ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ’ ಎಂದು ಆರೋಪಿಸಿದರು.
ತಾಜುದ್ದೀನ್ ದಳಪತಿ, ಮಂಜುನಾಥ ಟೆಂಗುಂಟಿ, ಮುರುಳಿ ಹಿರೇಮನಿ, ಎಂ.ಡಿ. ಯೂಸೂಫ್, ಅಮರೇಶ ಕಾಮನೂರ, ತೊಂಡೆಪ್ಪ ಚೂರಿ, ಪ್ರಮೋದ ಬಡಿಗೇರ, ಸದ್ದಾಂ ಅಮರಾವತಿ ಹಾಗೂ ಮಹಿಬೂಬುಸಾಬ್ ದಾದಿಬಾಯಿ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.