ADVERTISEMENT

‘10 ದಿನಗಳಲ್ಲಿ ಕಾರಟಗಿ ಬೆಳೆ ಸಮೀಕ್ಷೆ ಪೂರ್ಣ’

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 6:22 IST
Last Updated 22 ನವೆಂಬರ್ 2021, 6:22 IST
ಕಾರಟಗಿ ತಾಲ್ಲೂಕಿನ ಬೂದಗುಂಪಾ ಗ್ರಾಮದಲ್ಲಿ ಮಳೆಯಿಂದ ನಷ್ಟವಾದ ಭತ್ತದ ಬೆಳೆಯನ್ನು ಶಾಸಕ ಬಸವರಾಜ ದಢೇಸುಗೂರು ಭಾನುವಾರ ಪರಿಶೀಲಿಸಿದರು
ಕಾರಟಗಿ ತಾಲ್ಲೂಕಿನ ಬೂದಗುಂಪಾ ಗ್ರಾಮದಲ್ಲಿ ಮಳೆಯಿಂದ ನಷ್ಟವಾದ ಭತ್ತದ ಬೆಳೆಯನ್ನು ಶಾಸಕ ಬಸವರಾಜ ದಢೇಸುಗೂರು ಭಾನುವಾರ ಪರಿಶೀಲಿಸಿದರು   

ಕಾರಟಗಿ: ‘ಮಳೆ ಲೆಕ್ಕಿಸದೇ ಅಧಿಕಾರಿಗಳು ಬೆಳೆ ಹಾನಿ ಸರ್ವೇ ಕಾರ್ಯದಲ್ಲಿ ತೊಡಗಿದ್ದಾರೆ. ಸರ್ಕಾರಕ್ಕೆ ಸಮೀಕ್ಷಾ ವರದಿ ಸಲ್ಲಿಸಲಾಗುವುದು. ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವರನ್ನು ಭೇಟಿ ಮಾಡಿ ಹತ್ತು ದಿನಗಳಲ್ಲಿಯೇ ರೈತರಿಗೆ ಪರಿಹಾರ ಮಂಜೂರು ಮಾಡಿಸಲಾಗುವುದು’ ಎಂದು ಶಾಸಕ ಬಸವರಾಜ ದಢೇಸೂಗೂರು ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಮಳೆ ನಿಲ್ಲುವ ಸಾಧ್ಯತೆಯಿದೆ. ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಬೇಗ ಸರ್ವೇ ಕಾರ್ಯ ಮುಗಿಸಬೇಕು ಎಂದು ಸೂಚಿಸಲಾಗಿದೆ. ರೈತರು ಅಧಿಕಾರಿಗಳಿಗೆ ಬೆಳೆ ಹಾನಿ ದಾಖಲೆ ನೀಡಿ ಸಹಕರಿಸಬೇಕು’ ಎಂದು ಕಿವಿಮಾತು ಹೇಳಿದರು.
ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಬೆಳೆಹಾನಿ ಕುರಿತು ಮಾಹಿತಿ ನೀಡಿದ್ದೇನೆ. ಉಸ್ತುವಾರಿ ಸಚಿವ, ಕೃಷಿ ಸಚಿವ, ಸಂಸದರು ಹಾಗೂ ಶಾಸಕರೆಲ್ಲರೂ ನಿಯೋಗದಲ್ಲಿ ತೆರಳಿ ವೈಮಾನಿಕ ಸಮೀಕ್ಷೆ ನಡೆಸಿ ಎಂದು ಮುಖ್ಯಮಂತ್ರಿ ಅವರನ್ನು ಕೋರುತ್ತೇವೆ ಎಂದರು.

ಸುಳ್ಳು ಹೇಳುವವರ ಇನ್ನೊಂದು ಹೆಸರೇ ಕಾಂಗ್ರೆಸ್‌. ಅದಕ್ಕೆ ಪ್ರಾಯಶ್ಚಿತ್ತವೆನ್ನುವಂತೆ ಮತದಾರರು ತೀರ್ಪು ನೀಡಿ ಮನೆಯಲ್ಲಿ ಕೂಡಿಸಿದ್ದಾರೆ. ಮಾಜಿ ಸಚಿವ ಶಿವರಾಜ ತಂಗಡಗಿ ಇದಕ್ಕೆ ಹೊರತಲ್ಲ. ಅವರಿಗೆ ಮಳೆಯಿಂದ ರೈತರ ಜಮೀನುಗಳಿಗೆ ತೆರಳುವ ಕೆಲಸ ಸಿಕ್ಕಿದೆ. ರೈತರ ವಿಷಯದಲ್ಲಿ ರಾಜಕೀಯ ಬೇಡ. ಅವರಿಗೂ ಜವಾಬ್ದಾರಿಯಿದೆ. ಪ್ರಾಮಾಣಿಕವಾಗಿ ಪರಿಹಾರ ಕೊಡಿಸುವ ಕೆಲಸ ಮಾಡೋಣ ಎಂದರು.

ADVERTISEMENT

ತಾಲ್ಲೂಕಿನ ಕಾರಟಗಿ ಹಾಗೂ ಸಿದ್ದಾಪುರ ಹೋಬಳಿಯ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ಶಾಸಕ ದಢೇಸೂಗೂರು ಭಾನುವಾರ ನೀಡಿ ಪರಿಶೀಲಿಸಿದರಲ್ಲದೇ ಮಳೆಗೆ ಕೇವಲ ಶೇ. 25ರಷ್ಟು ಮಾತ್ರ ಬೆಳೆ ನಾಶವಾಗಿದೆ ಎಂದರು. ಬಿಜೆಪಿ ಬ್ಲಾಕ್ ಅಧ್ಯಕ್ಷ ಚಂದ್ರಶೇಖರ ಮುಸಾಲಿ, ಗಂಗಾವತಿ ಎಪಿಎಂಸಿ ಅಧ್ಯಕ್ಷ ಚಂದ್ರುಗೌಡ ಯರಡೋಣಾ, ವಿಶೇಷ ಎಪಿಎಂಸಿ ನಿರ್ದೇಶಕ ಜಿ. ಗೋಪಾಲರಾವ್, ಮಾಜಿ ನಿರ್ದೇಶಕ ಬಿ. ಕಾಶಿವಿಶ್ವನಾಥ, ಮಾಜಿಅಧ್ಯಕ್ಷ ಸಿ. ದುರ್ಗಾರಾವ್, ಪುರಸಭೆ ಮಾಜಿ ಸದಸ್ಯ ಜಿ. ತಿಮ್ಮನಗೌಡ ಪ್ರಮುಖರಾದ ಗುರುಸಿದ್ದಪ್ಪ ಯರಕಲ್ ಹಾಗೂ ಮಂಜುನಾಥ ಮಸ್ಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.