ಗಂಗಾವತಿ: ಭೋವಿ, ಕೊರಚ, ಕೊರಮ, ಲಂಬಾಣಿ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ಅಸ್ಪೃಶ್ಯ ಜಾತಿಗಳ ಮಹಾಸಭಾದ ಮುಖಂಡರು ತಾಲ್ಲೂಕು ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಮಹಾಸಭಾದ ಮುಖಂಡ ತಿಪ್ಪಣ್ಣ ಆರತಿ ಮಾತನಾಡಿ, ಸ್ಪೃಶ್ಯ ಜಾತಿಗಳಿಂದ ಅಸ್ಪೃಶ್ಯ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಪರಿಶಿಷ್ಟ ಜಾತಿಗಳ ಸೌಲಭ್ಯ ಹಂಚಿಕೆಯಲ್ಲಿ ಅಸಮತೋಲನ ಉಂಟಾಗಿದೆ. ರಾಜಕೀಯ ಹಿತಾಸಕ್ತಿಗೋಸ್ಕರ ಕೆಲ ರಾಜಕಾರಣಿಗಳು ಸ್ಪೃಶ್ಯ ಜಾತಿಗಳನ್ನು ಪರಿಶಿಷ್ಟರ ಪಟ್ಟಿಗೆ ಸೇರಿಸಿದ್ದಾರೆ ಎಂದು ದೂರಿದರು.
ಮೂಲ ಪರಿಶಿಷ್ಟರು ಈಗ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್ ಮೊರೆಹೋದ ಕಾರಣ ನ್ಯಾಯಾಲಯವು ಲಂಬಾಣಿ, ಭೋವಿ, ಕೊರಚ ಸಮುದಾಯದವರನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ಕೈ ಬಿಡುವಂತೆ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ನಿರ್ದೇಶನ ನೀಡಿದ್ದು, ರಾಜ್ಯ ಸರ್ಕಾರ ನ್ಯಾಯಾಲಯದ ನಿರ್ದೇಶನ ಪಾಲಿಸಬೇಕು ಎಂದು ಒತ್ತಾಯಿಸಿದರು.
ಹೊಲೆಯ, ಮಾದಿಗ, ಮೋಚಿ ಸಮುದಾಯಕ್ಕೆ ಶೇ 20ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಬೇಕು.
ಸ್ಪರ್ಶ ಜಾತಿಯಲ್ಲಿ ಬರುವ ಲಂಬಾಣಿ, ಭೋವಿ, ಕೊರಚರು ಸಹ ಅಸ್ಪೃಶ್ಯತೆ ಆಚರಣೆ ಮಾಡಿ ದೌರ್ಜನ್ಯ ಎಸಗುತ್ತಿದ್ದು ಸರ್ಕಾರ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು
ಆಗ್ರಹಿಸಿದರು.
ತಿಮ್ಮಣ್ಣ, ಬೋಜಪ್ಪ, ರವಿ ಆರತಿ, ಹುಲಗಪ್ಪ, ಹನುಮಂತಪ್ಪ, ಸೋಮಪ್ಪ ಅಕ್ಕಿರೊಟ್ಟಿ, ಹಂಪಣ್ಣ, ದುರಗೇಶ್, ಸೋಮನಾಥ, ದೇವಪುತ್ರಪ್ಪ, ಶಂಕರ ಸಿದ್ದಾಪುರ, ಶಿವಪ್ಪ ಪೂಜಾರ, ಪಾಮಪ್ಪ ಕಾಳಿ, ಮುದಿಯಪ್ಪ ತಿಮ್ಮಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.