ಕನಕಗಿರಿ: ತಾಲ್ಲೂಕಿನ ಮುಸಲಾಪುರ ಗ್ರಾಮದ ಚನ್ನಬಸವೇಶ್ವರ ಹಾಗೂ 13ನೇ ವರ್ಷದ ಜಾತ್ರೆ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ದೇವಸ್ಥಾನದಲ್ಲಿ ಚನ್ನಬಸವೇಶ್ವರ ಹಾಗೂ ಮಾರುತೇಶ್ವರ ದೇವರ ಅಗ್ನಿಕುಂಡ, ಅನ್ನಪಾಯಸ, ಹಾಲು ಓಕುಳಿ, ರಥಕ್ಕೆ ಅನ್ನಬಲಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ, ಭಕ್ತಿಯಿಂದ ನಡೆದವು.
ತೇರು ಬೀದಿ, ಮನೆ, ಮಾಳಿಗೆ ಮೇಲೆ ನಿಂತ ಭಕ್ತರು ಬಾಳೆಹಣ್ಣು, ಉತ್ತುತ್ತಿ, ಹೂ ಎಸೆದು ಧನ್ಯತೆ ಮೆರೆದರು. ದೇವಸ್ಥಾನದ ಆವರಣದಲ್ಲಿ ಅನ್ನ ದಾಸೋಹ ನಡೆಯಿತು.
ರಥೋತ್ಸವದ ನಿಮಿತ್ತ ಜನ ಮೆಚ್ಚಿದ ರಾಜಾಹುಲಿ ಅರ್ಥಾತ್ ಸೇಡು ತೀರಿಸಿದ ಸಹೋದರರು ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.
ಕೊಪ್ಪಳ, ಕುಷ್ಟಗಿ, ಮುಸಲಾಪುರ, ರಾಂಪುರ, ಕನಕಗಿರಿ, ಓಬಳಬಂಡಿ, ಚಿಕ್ಕಮಾದಿನಾಳ, ಹುಲಸನಹಟ್ಟಿ, ಹಾಸಗಲ್ ಸೇರಿದಂತೆ ಸುತ್ತಮುತ್ತಲ್ಲಿನ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಸಂಗಪ್ಪ ಸಜ್ಜನ್, ಶರಣೇಗೌಡ, ಅನಿಲಕುಮಾರ ಬಿಜ್ಜಳ, ಕಂಠಿರಂಗ ನಾಯಕ, ಶಾಸಕ ಬಸವರಾಜ ಧಡೇಸೂಗೂರು ಅವರ ಪುತ್ರ ಮೌನೇಶ ದಢೇಸೂಗೂರು, ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರೇಶಪ್ಪ ಸಮಗಂಡಿ ಪ್ರಮುಖರಾದ ಕೃಷ್ಣೇಗೌಡ, ವಿರೂಪಾಕ್ಷಪ್ಪ ಪಾಟೀಲ, ಬಸಂತಗೌಡ ಪಾಟೀಲ, ನಾಗರಾಜ ತಂಗಡಗಿ, ವಾಗೀಶ ಹಿರೇಮಠ, ಚೆನ್ನಬಸವ ತೆಗ್ಗಿನಮನಿ ಸೇರಿದಂತೆ ವಿವಿಧ ಪಕ್ಷದ ಮುಖಂಡರು ಇದ್ದರು.
ರಥ ಸಾಗುವಾಗ ಯುವಕರು ಸೆಲ್ಪಿಗೆ ಮುಗಿ ಬಿದ್ದಿರುವುದು ಕಂಡು ಬಂತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.