ADVERTISEMENT

ಮಳೆಗೆ ತಿರುಗಲ್ ತಿಮ್ಮಪ್ಪ ಕೋಟೆ ಕುಸಿತ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 4:02 IST
Last Updated 25 ನವೆಂಬರ್ 2021, 4:02 IST
ಕೊಪ್ಪಳ ತಾಲ್ಲೂಕಿನ ಕೆರೆಹಳ್ಳಿ ಸಮೀಪದ ತಿರುಗಲ್‌ ತಿಮ್ಮಪ್ಪ ಕೋಟೆ ಕುಸಿದಿರುವುದು
ಕೊಪ್ಪಳ ತಾಲ್ಲೂಕಿನ ಕೆರೆಹಳ್ಳಿ ಸಮೀಪದ ತಿರುಗಲ್‌ ತಿಮ್ಮಪ್ಪ ಕೋಟೆ ಕುಸಿದಿರುವುದು   

ಕೊಪ್ಪಳ: ‘ಮಳೆಗೆ ಐತಿಹಾಸಿಕ ತಿರುಗಲ್ ತಿಮ್ಮಪ್ಪ ದೇವಸ್ಥಾನದ ಕೋಟೆ ಗೋಡೆ ಕುಸಿದಿದೆ. ಜಿಲ್ಲಾಡಳಿತ ರಕ್ಷಣೆಗೆ ಮುಂದಾಗಬೇಕು’ ಎಂದು ಇತಿಹಾಸ ಪ್ರಿಯರು ಮನವಿ ಮಾಡಿದ್ದಾರೆ.

ವಿಜಯನಗರ ಆಳರಸರ ಕಾಲದಲ್ಲಿ ನಿರ್ಮಿತವಾದ ತಿರುಗಲ್ ತಿಮ್ಮಪ್ಪ ದೇವಸ್ಥಾನ ಗೋಪುರ, ಲಕ್ಷ್ಮೀದೇವಿ ಮಂದಿರಗಳು ಶಿಥಿಲಾವಸ್ಥೆಗೆ ತಲುಪಿವೆ. ಇವುಗಳನ್ನು ರಕ್ಷಣೆ ಮಾಡಿದರೆ ಮುಂದಿನ ಪೀಳಿಗೆಗೆ ಉಳಿಸಿಕೊಂಡಂತಾಗುತ್ತದೆ. ಇದೀಗ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಕೋಟೆಯ ಗೋಡೆ ಕುಸಿಯುತ್ತಿದೆ. ಮಂದಿರ ಪ್ರವೇಶ ದ್ವಾರದ ಬಲ ಪಾರ್ಶ್ವದಲ್ಲಿ ಕೋಟೆಯ ಭಾಗ ಕುಸಿದು ಬಿದ್ದಿದೆ. ಜಿಲ್ಲೆಯ ಲ್ಲಿಯೇ ಅಪರೂಪವಾಗಿರುವ ಇಲ್ಲಿನ ಕೋಟೆ, ಸಾಲು ಮಂಟಪಗಳು ನಶಿಸುವ ಮುನ್ನ ಇವುಗಳನ್ನು ರಕ್ಷಿಸುವುದು ಅಗತ್ಯ ಎಂದು ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಅಧ್ಯಕ್ಷ ವೀರಣ್ಣ ಕೋಮಲಾಪುರ ಮತ್ತು ಪ್ರಧಾನ ಕಾರ್ಯದರ್ಶಿ ವಸಂತ್ ಶಿಳ್ಳೆಕ್ಯಾತರ್ ಅವರು ಮನವಿ ಮಾಡಿದ್ದಾರೆ.

ಮಂದಿರ ಹಾಗೂ ಕೋಟೆಗೆ ಹೊದಿಸಿದ ಕಲ್ಲುಗಳು ಧಾರಾಕಾರ ಮಳೆಗೆ ಉರುಳಿ ಬೀಳುತ್ತಿವೆ. ತಿಮ್ಮಪ್ಪ, ಲಕ್ಷ್ಮೀದೇವಿ ಮಂದಿರ, ಸಾಲು ಮಂಟಪ ಮತ್ತು ಕೋಟೆ ಭಾಗಗಳು ಬೀಳುವ ಅಪಾಯವಿದೆ. ನೂರಾರು ವರ್ಷಗಳ ಇತಿಹಾಸವಿರುವ ಈ ಮಂದಿರವನ್ನು ರಕ್ಷಿಸುವುದು ಎಲ್ಲರ ಹೊಣೆಯಾಗಿದೆ ಎಂದೂ ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.