ಬಸಾಪುರ (ಮುನಿರಾಬಾದ್): ಸಮೀಪದ ಬಸಾಪುರ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥನಿಂದ ವಿರೂಪಗೊಂಡಿದ್ದ ಗಾಂಧಿ ಪ್ರತಿಮೆಯ ಸ್ಥಾನದಲ್ಲಿ ನೂತನ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಕೊಪ್ಪಳ ತಾಲ್ಲೂಕಿನ ಗಡಿಗ್ರಾಮ ಬಸಾಪುರದಲ್ಲಿ ಕಳೆದ ತಿಂಗಳು ಮಾನಸಿಕ ಅಸ್ವಸ್ಥನೊಬ್ಬ ಮುಖ್ಯ ವೃತ್ತದಲ್ಲಿನ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಿದ್ದ ಪ್ರಕರಣ ಗ್ರಾಮದಲ್ಲಿ ಉದ್ವಿಗ್ನ ವಾತಾವರಣವನ್ನು ಉಂಟುಮಾಡಿತ್ತು.
ಗ್ರಾಮಸ್ಥರು ಅದೇ ಸ್ಥಳದಲ್ಲಿ ನೂತನ ಮೂರ್ತಿಯನ್ನು ಅನಾವರಣಗೊಳಿಸಲು ಪಣತೊಟ್ಟರು. ಯೋಜನೆಯಂತೆ ಹಣವನ್ನು ಸಂಗ್ರಹಿಸಿ ಈಚೆಗೆ ನೂತನ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.
ನೂತನ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಪ್ರತಿಮೆ ವಿರೂಪಗೊಳಿಸಿದ ಪ್ರಕರಣ ನಡೆಯಬಾರದಾಗಿತ್ತು ಅದು ದುರದೃಷ್ಟಕರ. ಗ್ರಾಮಸ್ಥರ ಸಹಕಾರದಿಂದ ಸುಮಾರು ₹ 5 ಲಕ್ಷ ವೆಚ್ಚದಲ್ಲಿ 250ಕಿಲೋ ಗ್ರಾಂ. ತೂಕದ ನೂತನ ಕಂಚಿನ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಇದನ್ನು ಹೈದರಾಬಾದ್ನಲ್ಲಿ ತಯಾರಿಸಲಾಗಿದೆ. ಘಟನೆ ನಡೆದು 1ತಿಂಗಳ ಒಳಗೆ ನೂತನ ಪ್ರತಿಮೆಯನ್ನು ಅನಾವರಣಗೊಳಿಸಿದ ಗ್ರಾಮಸ್ಥರ ಸಹಕಾರ, ಸಹಬಾಳ್ವೆ ಮೆಚ್ಚುವಂತಹದ್ದು ಎಂದು ಶ್ಲಾಘಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಜನಾರ್ದನ ಮಾತನಾಡಿದರು.
ಎಪಿಎಂಸಿ ಅಧ್ಯಕ್ಷ ವಿಶ್ವನಾಥ ರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನಕೃಷ್ಣ ಗೊಲ್ಲರ, ಪಿಡಿಒ ರೇಣುಕಾ ಪಾಟೀಲ, ಪ್ರಮುಖರಾದ ದೇವಪ್ಪ ಮೇಕಾಳಿ, ಅಬ್ಬುಲಿಗೆಪ್ಪ, ನಾಗರಾಜ ಪಟವಾರಿ, ಹುಲುಗಪ್ಪ ಗಡಾದ, ವೈ.ರಮೇಶ, ಮಾದರ ಬೀ, ನಜೀರ್ ಸಾಬ್, ರೇಣುಕಾ ಕಟಗಿ, ಗಂಗಮ್ಮ ಓಬಳೇಶ, ಯಮನೂರಪ್ಪ, ದುರುಗಪ್ಪ, ಉಸ್ಮಾನ್ ಸಾಬ್, ಯಂಕಪ್ಪಹೊಸಹಳ್ಳಿ, ಮಲಿಯಪ್ಪ, ನರಸಿಂಹಮೂರ್ತಿ, ಕೊಟ್ರಯ್ಯಸ್ವಾಮಿ, ಗುಂಡಪ್ಪ ಇದ್ದರು.
ಆನಂದ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.