ಗಂಗಾವತಿ: ‘ಸರ್ಕಾರ ಜಾರಿಗೆ ತಂದ ಗೃಹಲಕ್ಷ್ಮೀ, ಯುವನಿಧಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ನೆಮ್ಮದಿಯಿಂದ ಜೀವನ ನಡೆಸಲು ಸಹಕಾರಿಯಾಗಿದೆ’ ಎಂದು ಗ್ಯಾರಂಟಿ ಯೊಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಡಾ.ಕೆ.ವೆಂಕಟೇಶ ಬಾಬು ಹೇಳಿದರು.
ತಾಲ್ಲೂಕಿನ ಬಸವನದುರ್ಗಾ ಹತ್ತಿರದ ಡುಮ್ಕಿಕೊಳ ಕೆರೆ ಹೂಳೆತ್ತುವ ಸ್ಥಳದಲ್ಲಿ ಗ್ಯಾರಂಟಿ ಯೊಜನೆಗಳ ಅನುಷ್ಠಾನ ಸಮಿತಿಯಿಂದ ಗ್ಯಾರಂಟಿ ಯೋಜನೆಗಳ ನಡೆ, ಗ್ರಾಮ ಪಂಚಾಯಿತಿಗಳ ಕಡೆ ಅಭಿಯಾನದಡಿ ಶುಕ್ರವಾರ ನಡೆದ ಚಿಕ್ಕ ಜಂತಗಲ್ ಗ್ರಾ.ಪಂ.ವ್ಯಾಪ್ತಿಯ ಹೊಸಳ್ಳಿ ಗ್ರಾಮದ ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಗ್ಯಾರಂಟಿ ಯೋಜನೆಗಳ ಸಹಾಯಧನವನ್ನ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಫಲಾನುಭವಿಗಳಿಗೆ ತಲುಪಿಸುತ್ತಿದೆ. ಈ ಯೋಜನೆಗಳ ಹಣವು ಬಡ ಕುಟುಂಬಗಳ ಮಕ್ಕಳ ಶಿಕ್ಷಣ, ಪುಸ್ತಕ ಖರೀದಿ, ಕುಟಂಬ ನಿರ್ವಹಣೆಗೆ ಬಳಕೆಯಾಗುತ್ತಿರುವುದು ಹೆಮ್ಮೆಯ ವಿಷಯ. ಶಕ್ತಿ ಯೋಜನೆ ವಿದ್ಯಾರ್ಥಿನಿಯರಿಗೆ ನೆರವಾಗಿದೆ. ಖಾಸಗಿ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಶಕ್ತಿ ತುಂಬಿದೆ. ನಿರುದ್ಯೋಗಿ ಮತ್ತು ಡಿಪ್ಲೊಮಾ ಪದವೀಧರರಿಗೆ ಯುವನಿಧಿ ಯೋಜನೆ ಉಪಕಾರಿಯಾಗಿದೆ. ಅನ್ನಭಾಗ್ಯ ಯೋಜನೆ ಬಡವರ ಹೊಟ್ಟೆ ತುಂಬಿಸುತ್ತಿದೆ’ ಎಂದರು.
ಕಾರ್ಯಕ್ರಮದಲ್ಲಿ ಹೊಸಳ್ಳಿ ಗ್ರಾಮದ ಫಲಾನುಭವಿ ದುರಗಮ್ಮ ಮಾತನಾಡಿ, ‘ಗೃಹಲಕ್ಷ್ಮಿ ಯೋಜನೆ ಹಣ ನನಗೆ ಈ ವರೆಗೆ ಜಮಾ ಆಗಿಲ್ಲ. ನನಗಿರುವುದು ಕೆನರಾ ಬ್ಯಾಂಕ್ ಖಾತೆ’ ಮಾತ್ರ ಎಂದರು. ಕೂಡಲೇ ಗ್ಯಾರಂಟಿ ಸಮಿತಿ ಸದಸ್ಯರು ಫಲಾನುಭವಿ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಅಂಚೆ ಕಚೇರಿಯಲ್ಲಿರುವ ಮತ್ತೊಂದು ಖಾತೆಗೆ ಎಲ್ಲ ಕಂತುಗಳ ಗೃಹಲಕ್ಷ್ಮೀ ಹಣ ಜಮಾ ಆಗಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಎಸ್.ಬಿ.ಖಾದ್ರಿ, ಜಿಲ್ಲಾ ಸಮಿತಿ ಸದಸ್ಯ ಆನಂದ ಆಸಲ್ಕರ್, ತಾ.ಪಂ ಇಒ ರಾಮರೆಡ್ಡಿ ಪಾಟೀಲ, ಆನೆಗೊಂದಿ ಗ್ರಾ.ಪಂ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ, ಚಿಕ್ಕಜಂತ ಕಲ್ ಗ್ರಾ.ಪಂ ಉಪಾಧ್ಯಕ್ಷ ನಾಗಪ್ಪ ಬಲಕುಂದಿ, ಚಿಕ್ಕಜಂ ತಕಲ್ ಪಿಡಿಓ ಮಲ್ಲಿಕಾರ್ಜುನ ಕಡಿವಾಳ, ಆನೆಗೊಂದಿ ಪಿಡಿಒ ರವೀಂದ್ರ ಕುಲ್ಕರ್ಣಿ, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಅಹ್ಮದ್ ಪಟೇಲ್, ನಾಗಮ್ಮ, ಒಂಕಾರಪ್ಪ, ರಾಜಪ್ಪ, ಮುಸ್ತಕ್, ಅಂಗನ ವಾಡಿ ಮೇಲ್ವಿಚಾರಕಿ ಈರಮ್ಮ, ನರೇಗಾ ಟಿಎಇ ಶರಣಯ್ಯ ಸ್ವಾಮಿ ಉಪಸ್ಥಿತರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.