ADVERTISEMENT

ಕೊಪ್ಪಳ | 'ಸರ್ಕಾರಿ ಜಮೀನು ಖಾಸಗಿ ವ್ಯಕ್ತಿಗಳ ಪಾಲು'

ಅಧಿಕಾರಿಗಳಿಂದ ಸುಳ್ಳು ಮಾಹಿತಿ ಆರೋಪ: ಕೊಪ್ಪಳ ಲೋಕಾಯುಕ್ತರಿಂದ ವಿಚಾರಣೆ ಚುರುಕು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 6:13 IST
Last Updated 13 ಆಗಸ್ಟ್ 2025, 6:13 IST
ಕುಷ್ಟಗಿ ತಹಶೀಲ್ದಾರ್‌ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದರು
ಕುಷ್ಟಗಿ ತಹಶೀಲ್ದಾರ್‌ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದರು   

ಕೊಪ್ಪಳ: ಕಾನೂನು ಬಾಹಿರವಾಗಿ ಸರ್ಕಾರಿ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದರಿಂದ ಸರ್ಕಾರದ ಆಸ್ತಿ ಖಾಸಗಿಯವರ ಪಾಲಾದ ಆರೋಪ ಕೇಳಿ ಬಂದಿದ್ದು, ಈ ಕುರಿತು ಇಲ್ಲಿನ ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಯನ್ನು ಲೋಕಾಯುಕ್ತ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ 

ಆಗಿದ್ದೇನು: ಕುಷ್ಟಗಿ ತಾಲ್ಲೂಕಿನ ಕಡೂರು (ಚಿತ್ತವಾಡಿಗೆ) ಕೆರೆಗೆ ಪುರ್ತಗೇರಿ ಗ್ರಾಮದಲ್ಲಿ ಈರಪ್ಪ ವಜ್ಜಲ ಮತ್ತು ಸಂಗಪ್ಪ ಜಿಗೇರಿ ಇಬ್ಬರದ್ದೂ ಸೇರಿ ಒಟ್ಟು 6.8 ಎಕರೆಯಲ್ಲಿ 5.8 ಎಕರೆ ಬಾಗಲಕೋಟೆ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿಗೆ ಭೂ ಸ್ವಾಧೀನವಾಗಿದ್ದು, ಪರಿಹಾರವಾಗಿ ಆಗ ಹಣ ನೀಡಲಾಗಿದೆ. 

ಜಮೀನು ಸರ್ವೆ ಸಂಖ್ಯೆ 26/1ಎ ನಲ್ಲಿ ಉಳಿದ 20 ಗುಂಟೆ ಹಾಗೂ 26/1ಬಿ ನಲ್ಲಿ ಇದ್ದ 20 ಗುಂಟೆ ಜಮೀನನ್ನೂ 1988–89ರಲ್ಲಿ ಸ್ವಾಧೀನಕ್ಕೆ ಪಡೆದು ಪರಿಹಾರವನ್ನೂ ನೀಡಲಾಗಿದೆ. ಆದರೆ ಇದೇ ಜಮೀನನ್ನು 2014ರಲ್ಲಿ ಖಾಸಗಿ ವ್ಯಕ್ತಿಗಳಿಗೆ ವರ್ಗಾಯಿಸುವ ಸಂಬಂಧ ಆಗಿನ ಅಧಿಕಾರಿಗಳು ಕಾನೂನು ಬಾಹಿರವಾಗಿ ಕೆಲಸ ಮಾಡಿದ್ದಾರೆ ಎನ್ನುವ ದೂರು ದಾಖಲಾಗಿದೆ. 

ADVERTISEMENT

ಆಗಿನ ಕುಷ್ಟಗಿ ತಹಶೀಲ್ದಾರ್‌ ಆಗಿದ್ದ ಗಂಗಪ್ಪ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರಿಂದ ವರದಿ ಪಡೆದು ಸರ್ಕಾರಿ ಭೂಮಿಯನ್ನು ವರ್ಗಾವಣೆ ಮಾಡಿದ್ದಾರೆ. ತಹಶೀಲ್ದಾರ್‌ ಸೂಚನೆಯಂತೆ ಯರಿಗೋನಾಳ ಗ್ರಾಮ ಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಪಂಚನಾಮೆ ವರದಿ ಸಲ್ಲಿಕೆ ಮಾಡಿದ್ದು ಅದರಲ್ಲಿ ಎರಡೂ ಸರ್ವೆ ಸಂಖ್ಯೆಗಳಲ್ಲಿ ತಲಾ 20 ಗುಂಟೆ ಜಮೀನು ಮಾತ್ರ ಭೂಸ್ವಾಧೀನವಾಗಿದೆ.

ಸರ್ವೆ ಸಂಖ್ಯೆ 26/1/1ರಲ್ಲಿನ 2.24 ಎಕರೆ ಜಮೀನು ಈರಪ್ಪ ವಜ್ಜಲ, 26/1/2ರಲ್ಲಿನ 2.24 ಎಕರೆ ಜಮೀನನ್ನು ಸಂಗಪ್ಪ ಜಿಗೇರಿ ಹೆಸರಿಗೆ ಮಾಡಿಕೊಡುವಂತೆ 2014ರ ಸೆಪ್ಟಂಬರ್​ 17ರಂದು ಸುಳ್ಳು ವರದಿ ಸಲ್ಲಿಸಿದ್ದಾರೆ ಎಂದು ಲೋಕಾಯುಕ್ತಕ್ಕೆ ಸಲ್ಲಿಕೆಯಾದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಗ್ರಾಮ ಲೆಕ್ಕಾಧಿಕಾರಿ ವರದಿ, ಸ್ಥಳ ಪರಿಶೀಲನೆ ಬಳಿಕ ಆಗಿನ ಹನುಮಸಾಗರ ಕಂದಾಯ ನಿರೀಕ್ಷಕ ಮಹಮದ್​ ಮುಸ್ತಾಫ್‌ 2014ರಲ್ಲಿ ಕಾನೂನು ಬಾಹಿರವಾಗಿ ಖಾಸಗಿ ವ್ಯಕ್ತಿಗಳಿಗೆ ಜಮೀನು ವರ್ಗಾವಣೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಪೂರಕ ವರದಿ ಸಲ್ಲಿಸಿದ್ದಾರೆ. ಇದನ್ನು ತಹಶೀಲ್ದಾರ್‌ ಅನುಮೋದಿಸಿದ್ದು, ಇದನ್ನು ಆಧರಿಸಿ ಅಂದಿನ ಕೊಪ್ಪಳದ ಸಹಾಯಕ ಆಯುಕ್ತರಾಗಿದ್ದ ಇಸ್ಮಾಯಿಲ್​ಸಾಬ್​ ಶಿರಹಟ್ಟಿ 2016ರ ಏಪ್ರಿಲ್‌ 22ರಂದು ಈರಪ್ಪ ಮತ್ತು ಸಂಗಪ್ಪ ಜಿಗೇರಿ ಹೆಸರಿಗೆ ತಲಾ 2.24 ಎಕರೆ ಜಮೀನು ವರ್ಗಾವಣೆ ಮಾಡಿ ಆದೇಶ ಮಾಡಿದ್ದಾರೆ. ಮರುವರ್ಷದ ಏಪ್ರಿಲ್‌ 7ರಂದು ಇಳಕಲ್‌ ತಾಲ್ಲೂಕಿನ ಕೋಡಿಹಾಳ ಗ್ರಾಮದ ಮೆಹಬೂಬ್​ಸಾಬ್​ ಮುದಗಲ್​ ಎಂಬುವವರ ಹೆಸರಿಗೆ ಜಮೀನು ವರ್ಗವಾಗಿದೆ ಎನ್ನುವ ವಿವರ ದೂರಿನಲ್ಲಿದೆ.

ವಿಚಾರಣೆಗೆ ಸರ್ಕಾರದ ಅನುಮತಿ ಈ ಎಲ್ಲ ಅಕ್ರಮದ ಆರೋಪಗಳ ಬಗ್ಗೆ ವಿಚಾರಣೆ ನಡೆಸಲು 2020ರಲ್ಲಿ ಎಸಿಬಿಗೆ ದೂರು ಸಲ್ಲಿಕೆಯಾಗಿತ್ತು. ಆಗ ಎಸಿಬಿ ಅಧಿಕಾರಿಗಳು ಕುಷ್ಟಗಿಯ ಹಿಂದಿನ ತಹಶೀಲ್ದಾರ್‌ಗಳಾಗಿದ್ದ ಗಂಗಪ್ಪ ಎಂ. ಮತ್ತು ವೇದವ್ಯಾಸ ಮತಾಲಿಕ್​ ವಿರುದ್ಧ ತನಿಖೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ  ಅನುಮತಿ ಕೋರಿದ್ದರು. ಇದಕ್ಕೆ ಅನುಮತಿಯೂ ಲಭಿಸಿದೆ. ವೇದವ್ಯಾಸ್ ನಾಲ್ಕು ವರ್ಷಗಳ ಹಿಂದೆ ನಿಧನ ಹೊಂದಿದ್ದು ಗಂಗಪ್ಪ ಪ್ರಸ್ತುತ ಗದಗ ಜಿಲ್ಲೆಯ ಉಪವಿಭಾಗಾಧಿಕಾರಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.