ಚಿಂಚೋಳಿ: ತಾಲ್ಲೂಕಿನ ಸುಲೇಪೇಟದ ಖಟ್ವಾಂಗೇಶ್ವರ ಮಠದ ಗುರುಲಿಂಗ ಸ್ವಾಮೀಜಿ ಅವರ ಉತ್ತರ ಕ್ರಿಯಾವಿಧಿ ಸಂಸ್ಕಾರವನ್ನು ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಶ್ರೀಮಠದ ಆವರಣದಲ್ಲಿ ಬುಧವಾರ ನೆರವೇರಿಸಲಾಯಿತು.
ಶ್ರೀಮಠದಲ್ಲಿ ಪೂಜ್ಯರು ಆಸೀನರಾಗುತ್ತಿದ್ದ ಸ್ಥಳದಲ್ಲಿ ಇರಿಸಿದ್ದ ಶ್ರೀಗಳ ಪಾರ್ಥಿವ ಶರೀರವನ್ನು ಅಂತಿಮ ಸಂಸ್ಕಾರಕ್ಕೂ ಮುನ್ನ ಮಠದ ಮೂಲ ಗದ್ದುಗೆಯ ಎದುರು ಇರಿಸಲಾಯಿತು. ಆಗ ಮುರುಘಾ ಶರಣರು ಹೂಮಾಲೆ ಅರ್ಪಿಸಿ, ವಿಭೂತಿ ಹಚ್ಚಿ ಅಂತಿಮ ದರ್ಶನ ಪಡೆದರು.
ನಂತರ ಅಲ್ಲಿಂದ ಸಮಾಧಿ ಸ್ಥಳಕ್ಕೆ ತಂದು ಅಲ್ಲಿ ಉತ್ತರ ಕ್ರಿಯಾವಿಧಿ ಸಂಸ್ಕಾರ ನಡೆಸಲಾಯಿತು. ಷಟಸ್ಥಲ ರಂಗೋಲಿ ಬಳಿಯಲಾಗಿತ್ತು. ಶ್ರೀಗಳನ್ನು ಮಲಗಿಸಿ ಅಂತಿಮ ಸಂಸ್ಕಾರ ನೆರವೇರಿತು. ಆಗ ದಾರ ಮತ್ತು ತಾಮ್ರದ ತಂತಿಯ ಎಳೆಯೊಂದಿಗೆ (ಪಂಚಸೂತ್ರ) ಜೋಡಿಸಿ ಶ್ರೀಗಳ ಕೈಯಿಂದ ಮುರುಘಾ ಶರಣರ ಪಾದದವರೆಗೆ ಎಳೆದು ಮುಟ್ಟಿಸಿದರು. ಆಗ ಶ್ರೀಗಳ ಪೇಟವನ್ನು ಭಕ್ತ ನಾಗಶೆಟ್ಟಿ ಕೊಟಗಿ ಅವರ ಕೈಗೆ ಶರಣರು ಹಸ್ತಾಂತರಿಸಿದರು.
ವಿಭೂತಿಗಟ್ಟಿಯಲ್ಲಿ ಶ್ರೀಗಳನ್ನು ಮುಚ್ಚಲಾಯಿತು. ಪಂಚಸೂತ್ರದ ದಾರ ಮತ್ತು ತಾಮ್ರದ ತಂತಿ ಗದ್ದುಗೆಯ ಮೇಲಿನ ಲಿಂಗದವರೆಗೆ ತೇಲಿಸಿದರು. ಈ ಮೂಲಕ ಗುರುಲಿಂಗ ಸ್ವಾಮೀಜಿ ಲಿಂಗದಲ್ಲಿ ಲೀನರಾದರು.
ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಮುಖಂಡರಾದ ಸುಭಾಷ ರಾಠೋಡ್, ಗೌತಮ ಪಾಟೀಲ, ಶಿವಕುಮಾರ ಪಾಟೀಲ, ಶರಣಪ್ಪ ತಳವಾರ, ಅಶೋಕ ಚವ್ಹಾಣ, ಗ್ರಾಮದ ಮುಖಂಡರಾದ ಬಸವರಾಜ ವಿ.ಸಜ್ಜನ್, ತಾ.ಪಂ. ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ, ಬಸವರಾಜ ಬಿ.ಸಜ್ಜನಶೆಟ್ಟಿ, ಶಿವಕುಮಾರ ಸೊಂತ, ಜಿಎಸ್ಎಸ್, ಶರಣು ಪಡಶೆಟ್ಟಿ, ಚಂದ್ರಶೇಖರ ಸ್ವಾಮಿ ಹೂನಳ್ಳಿ, ಶರಣು ಮಂಗಲಗಿ, ನಾಗಶೆಟ್ಟಿ ಕೊಟಗಿ, ಮಹೇಶ ಬೇಮಳಗಿ, ಅಮರೇಶ ಗೋಣಿ, ಬಸವರಾಜ ಸುಲೇಪೇಟ, ಬಸವರಾಜ ಐನೋಳ್ಳಿ, ರೇವಣಸಿದ್ದಯ್ಯ ನರನಾಳ್, ಬಸವಲಿಂಗಯ್ಯ ಸ್ವಾಮಿ, ಸಂಗಯ್ಯಸ್ವಾಮಿ ಅಣವಾರ ಇದ್ದರು.
25ರಂದು ಸ್ಮರಣೆ: ಸುಲೇಪೇಟದ ಖಟ್ವಾಂಗೇಶ್ವರ ಮಠದ ಆವರಣದಲ್ಲಿ ಗುರುಲಿಂಗ ಸ್ವಾಮೀಜಿಗಳ ಸ್ಮರಣೆ ಕಾರ್ಯಕ್ರಮವನ್ನು ಜುಲೈ 25ರಂದು ನಡೆಸಲಾಗುವುದು ಎಂದು ಮಠದ ಆಡಳಿತ ಮಂಡಳಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.