ಯಲಬುರ್ಗಾ: ತಾಲ್ಲೂಕಿನ ಕಲ್ಲೂರು ಗ್ರಾಮದ ಕಲ್ಲಿನಾಥೇಶ್ವರ ದೇವಸ್ಥಾನದಲ್ಲಿ ಸೋಮವಾರ ಕಾರ್ತಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸ್ಥಾನ ಹಿರೇಮಠದ ಪೀಠಾಧಿಕಾರಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಈ ಭಾಗದ ಅತ್ಯಂತ ಪ್ರಾಚೀನ ಹಾಗೂ ಐತಿಹಾಸಿಕ ಪರಂಪರೆಯನ್ನು ರೂಢಿಸಿಕೊಂಡು ಕಾರ್ತಿಕೋತ್ಸವವದಿಂದಲೇ ಖ್ಯಾತಿ ಪಡೆದ ಕಲ್ಲಿನಾಥೇಶ್ವರ ದೀಪಾರಾಧನೆ ಸಂಭ್ರಮವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಸಾಗಿದ್ದು ಸಂತಸದ ಸಂಗತಿಯಾಗಿದೆ. ಭಕ್ತರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಈ ದೇವಸ್ಥಾನದ ಸಮಗ್ರ ಅಭಿವೃದ್ಧಿ ಬಗ್ಗೆ ಸ್ಥಳೀಯ ಹಾಗೂ ಸರ್ಕಾರ ಕಾಳಜಿ ತೋರಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾಡಾ ಅಧ್ಯಕ್ಷ ಗಂಗಾವತಿಯ ತಿಪ್ಪೇರುದ್ರಸ್ವಾಮಿ ಮಾತನಾಡಿ, ಸಂಗೀತ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಲರವಕ್ಕೆ ಹೆಸರಾದ ಕಲ್ಲೂರು ಗ್ರಾಮದಲ್ಲಿ ಕಾರ್ತಿಕೋತ್ಸವ ಆಚರಣೆ ಅತ್ಯಂತ ಜನಾಕರ್ಷಣೆಯಿಂದ ಕೂಡಿದೆ ಎಂದರು.
ತುಲಾಭಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಅವರು ಮಾತನಾಡಿ, ಅಂಧ– ಅನಾಥ ಮಕ್ಕಳನ್ನು ಪುಣ್ಯಾಶ್ರಮಕ್ಕೆ ಕಳುಹಿಸುವಂತೆ ವಿನಂತಿಸಿದರು. ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಪತ್ರಕರ್ತ ಕೊಟ್ರಪ್ಪ ತೋಟದ, ವಿ.ಎಂ.ಭೂಸನೂರಮಠ, ವೀರಯ್ಯ ಸಂಗನಾಳಮಠ, ಕುಕನೂರಿನ ಡಾ.ಮಹಾದೇವ ದೇವರು, ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನ ಸಮಿತಿ ಅಧ್ಯಕ್ಷ ಕಳಕನಗೌಡ ಪಾಟೀಲ್ ಮಾತನಾಡಿದರು.
ಬೆದವಟ್ಟಿಯ ಶಿವಸಂಗಮಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಂಗಳೂರಿನ ಸಿದ್ಧಲಿಂಗ ಸ್ವಾಮೀಜಿ ನೇತೃತ್ವವಹಿಸಿದ್ದರು. ಗ್ರಾಪಂ ಅಧ್ಯಕ್ಷ ಕಲ್ಲಪ್ಪ ಕವಳಕಾಯಿ, ಸಂತೋಷ ದೇಶಪಾಂಡೆ, ದೊಡ್ಡಯ್ಯ ಹಿರೇಮಠ, ಸಾವಿತ್ರಿ ತಳವಾರ, ರಾಜೇಶ್ವರಿ ಸಂಗನಾಳಮಠ, ಬಸಪ್ಪ ಬಂಗಾಳಿಗಿಡ, ಜ್ಯೋತಿ ಪಲ್ಲೇದ, ಕಲ್ಲಪ್ಪ ಮೇಟಿ, ಮಾನಪ್ಪ ಪತ್ತಾರ, ಶರಣು ಶೆಟ್ಟರ, ಶಿವಪ್ಪ ಹೂಗಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.