ADVERTISEMENT

ಗಂಗಾವತಿ | ಕತ್ತೆಕಲ್ಲು ಗುಡ್ಡದಲ್ಲಿ ಶಿಲಾಶಾಸನ ಪತ್ತೆ

17ನೇ ಶತಮಾನದ ಕನ್ನಡ ಶಾಸನ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 15:27 IST
Last Updated 23 ಜೂನ್ 2025, 15:27 IST
ಗಂಗಾವತಿ ತಾಲ್ಲೂಕಿನ ಕೊಪ್ಪಳ ರಸ್ತೆಯಲ್ಲಿರುವ ಎಚ್.ಜಿ. ರಾಮುಲು ನಗರದ ಬಳಿಯ ಕತ್ತೆಕಲ್ಲು ಗುಡ್ಡದಲ್ಲಿ ಪತ್ತೆಯಾಗಿರುವ ಶಿಲಾ ಶಾಸನದೊಂದಿಗೆ ಸಂಶೋಧಕರು
ಗಂಗಾವತಿ ತಾಲ್ಲೂಕಿನ ಕೊಪ್ಪಳ ರಸ್ತೆಯಲ್ಲಿರುವ ಎಚ್.ಜಿ. ರಾಮುಲು ನಗರದ ಬಳಿಯ ಕತ್ತೆಕಲ್ಲು ಗುಡ್ಡದಲ್ಲಿ ಪತ್ತೆಯಾಗಿರುವ ಶಿಲಾ ಶಾಸನದೊಂದಿಗೆ ಸಂಶೋಧಕರು   

ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಎಚ್.ಜಿ. ರಾಮುಲು ನಗರದ ಬಳಿಯ ಕತ್ತೆಕಲ್ಲು ಗುಡ್ಡದಲ್ಲಿ ಶಿಲಾಯುಗದ ಗವಿಚಿತ್ರಗಳ ಜೊತೆಗೆ ಶಿಲಾಶಾಸನವೊಂದು ಪತ್ತೆಯಾಗಿದೆ.

ಗಂಗಾವತಿಯ ಇತಿಹಾಸ ಸಂಶೋಧಕ ಶರಣಬಸಪ್ಪ ಕೋಲ್ಕಾರ ನೇತೃತ್ವದಲ್ಲಿ ಮಂಜುನಾಥ ದೊಡ್ಡಮನಿ, ಚಂದ್ರಶೇಖರ ಕುಂಬಾರ, ನಾಗರಾಜ ಶಿವಪುರ ಅವರ ತಂಡ ಶಿಲಾಶಾಸನ ಶೋಧಿಸಿದೆ.

ಕತ್ತೆಕಲ್ಲು ಗುಡ್ಡದ ಬುಡದ ಕಲ್ಲಾಸರೆಯಲ್ಲಿ 17ನೇ ಶತಮಾನದ ಕನ್ನಡ ಶಾಸನ ಪತ್ತೆಯಾಗಿದೆ. ಈ ಶಾಸನವು 5 ಸಾಲಿನಲ್ಲಿದೆ. ಸೂರ್ಯ, ಚಂದ್ರ, ದ್ವಿನಾಮ ಮತ್ತು ಬಿಲ್ಲು ಬಾಣದ ಚಿತ್ರಗಳ ಜೊತೆ ಬರೆಯಲಾಗಿದೆ. ಶಾಸನವು ರಾಮನಾಥ ದೇವರ ಆರಾಧನೆಗಾಗಿ ಚಿನ್ನಾಯಕ‌ನು 22 ಖಂಡುಗ ಹೊಲವನ್ನು ದಾನವಾಗಿ ನೀಡಿದ ಬಗ್ಗೆ ತಿಳಿಸುತ್ತದೆ. ಶಾಸನ ‘ಜಯತು ಮಸ್ತು’ ಎಂದು ಕೊನೆಗೊಳ್ಳುತ್ತದೆ. ರಾಮನಾಥ ದೇವರು ಮತ್ತು ಚಿನ್ನಾಯಕ ಯಾರು ಎನ್ನುವುದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಬೇಕಿದೆ ಎನ್ನುತ್ತಾರೆ ಸಂಶೋಧಕರು.

ADVERTISEMENT

‘ಬೆಟ್ಟದ ತುದಿಯಲ್ಲಿನ ಮತ್ತೊಂದು ಕಲ್ಲಾಸರೆಯಲ್ಲಿ ಆದಿ ಮಾನವರು ಬಿಡಿಸಿರುವ ವರ್ಣಚಿತ್ರಗಳಿವೆ. ಕೆಂಪುವರ್ಣದಲ್ಲಿ ಹಲವು ಚಿತ್ರಗಳನ್ನು ಬಿಡಿಸಲಾಗಿದೆ. ಪರಸ್ಪರ ಕೈ ಹಿಡಿದು ನಿಂತಿರುವ ದಂಪತಿ ಚಿತ್ರಗಳು, ಹಲವು ಸಂಕೇತಗಳ ಚಿತ್ರಗಳಿವೆ. ಚಿತ್ರಗಳ ಶೈಲಿಯಿಂದ ಇವು ಸುಮಾರು 3000 ವರ್ಷಗಳ ಹಿಂದಿನ ಶಿಲಾತಾಮ್ರಯುಗಕ್ಕೆ ಸೇರುತ್ತವೆ. ಸೀಳು ಬಂಡೆಯ ಮೇಲೆ ಸಾಲಾಗಿರುವ ಕಲ್ಲುಗುಳಿಗಳನ್ನು ಕಲ್ಲಿನ ತುಂಡಿನಿಂದ ಬಾರಿಸಿದರೆ ಒಂದು ರೀತಿಯ ನಾದ ಹೊರಡುತ್ತದೆ. ಈ ಗವಿಯು ಶಿಲಾತಾಮ್ರಯುಗದ ಪಶುಪಾಲಕ ಜನರು ತಮ್ಮ ಮನರಂಜನೆಗಾಗಿ ಕಲ್ಲುಗಳಿಂದ ನಾದಗಳನ್ನು ಹೊರಡಿಸುವ, ಚಿತ್ರಗಳನ್ನು ಬಿಡಿಸುವುದನ್ನು ಮಾಡುತ್ತಿದ್ದರು ಎಂದು ತರ್ಕಿಸಬಹುದು’ ಎನ್ನುತ್ತಾರೆ ಸಂಶೋಧಕರು.

Quote - ಹಿರೇಬೆಣಕಲ್ ಸಹಿತ ಏಳು ಗುಡ್ಡಗಳಲ್ಲಿ ನೂರಾರು ಗವಿಚಿತ್ರಗಳು ಕಂಡು ಬಂದಿವೆ. ಅವುಗಳಿಂದ ಕರ್ನಾಟಕದ ಆದಿಮಾನವನ ಜೀವನ ಸಂಸ್ಕೃತಿ ತಿಳಿಯಲು ಸಾಧ್ಯವಾಗಿದೆ. ಅದಕ್ಕೆ ಈ ಚಿತ್ರಗಳು ಪೂರಕವಾಗಿವೆ ಶರಣಬಸಪ್ಪ ಕೋಲ್ಕಾರ ಸಂಶೋಧಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.