ಗಂಗಾವತಿ: ತಾಲ್ಲೂಕಿನ ಚಿಕ್ಕಬೆಣಕಲ್ ಸಮೀಪ ಕಾರು- ಆಟೊ ನಡುವೆ ಬುಧವಾರ ಡಿಕ್ಕಿ ಸಂಭವಿಸಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಗಳನ್ನು ಕೊಪ್ಪಳ ಗವಿಮಠದ ಗವಿಶ್ರೀ ಅವರು ಅಂಬುಲನ್ಸ್ ಮೂಲಕ ಚಿಕಿತ್ಸೆಗಾಗಿ ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ಕಳಿಸಿಕೊಡಲು ಮುತುವರ್ಜಿ ವಹಿಸಿದ ಘಟನೆ ಬುಧವಾರ ನಡೆದಿದೆ.
ಗವಿಸಿದ್ದೇಶ್ವರ ಸ್ವಾಮೀಜಿ ಅವರು ಗಂಗಾವತಿ ಮಾರ್ಗವಾಗಿ ಕೊಪ್ಪಳಕ್ಕೆ ತೆರಳುತ್ತಿರುವಾಗ ಈ ಅಪಘಾತ ಸಂಭವಿಸಿತ್ತು. ಶ್ರೀಗಳು ಕೂಡಲೇ ತಾವು ಪ್ರಯಾಣಿಸುತ್ತಿದ್ದ ವಾಹನ ನಿಲ್ಲಿಸಿ, ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಎತ್ತಿ ಆಂಬುಲೆನ್ಸ್ನಲ್ಲಿ ಕಳುಹಿಸಿದರು.
ಗಾಯಗೊಂಡವರನ್ನು ಎಚ್.ಆರ್.ಜಿ ನಗರದ ಬಸವರಾಜ ಮತ್ತು ನಿಂಗಜ್ಜ ಎಂದು ಗುರುತಿಸಲಾಗಿದೆ. ಗಂಗಾವತಿಯಿಂದ ಎಚ್.ಆರ್.ಜಿ ನಗರಕ್ಕೆ ಆಟೊ ಹೋಗುತ್ತಿರುವಾಗ ಬೆಣಕಲ್ ಸಮೀಪ ಕಾರು ಡಿಕ್ಕಿಯಾಗಿದೆ. ಗಾಯಾಳುಗಳು ಸದ್ಯಕ್ಕೆ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀಗಳು ಅಪಘಾತ ಸ್ಥಳದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಕಳಿಸಿಕೊಟ್ಟ ವಿಡಿಯೊ, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರ ಪಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.