ADVERTISEMENT

ಎಲ್ಲರ ಧ್ವನಿಯಾಗಿ ಶಾಮನೂರು ಮಾತನಾಡಿದ್ದಾರೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2023, 15:37 IST
Last Updated 30 ಸೆಪ್ಟೆಂಬರ್ 2023, 15:37 IST
   

ಕೊಪ್ಪಳ: ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಸರ್ಕಾರದಲ್ಲಿ ಮನ್ನಣೆ ಸಿಗುತ್ತಿಲ್ಲ ಎಂಬ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ನೊಂದ ಎಲ್ಲರ ಧ್ವನಿಯಾಗಿದೆ ಎಂದು ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಯಲಬುರ್ಗಾ ತಾಲ್ಲೂಕಿನ ಹಿರೇವಂಕಲಕುಂಟಿಯಲ್ಲಿ ಶನಿವಾರ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗಾಗಿ ಇಷ್ಟಲಿಂಗ ಪೂಜೆ ನೆರವೇರಿಸಿ ಬಳಿಕ‌ ಸುದ್ದಿಗಾರರ ಜೊತೆ ಮಾತನಾಡಿದರು.

ಲಿಂಗಾಯತ ಸಮಾಜದ ಅಧಿಕಾರಿಗಳಿಗೆ ಮನ್ನಣೆ ಸಿಗುತ್ತಿಲ್ಲ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ನನಗೂ ಹಲವು ಜನ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಪೋನ್ ಮಾಡಿ ಹೇಳಿದ್ದಾರೆ ಆದರೆ, ನಾನು ಅಧಿಕಾರಿ ಹಾಗೂ ಆಡಳಿತ ವಿಚಾರದಲ್ಲಿ ಕೈ ಹಾಕುವುದಿಲ್ಲ ಎಂದರು.

ADVERTISEMENT

ಪಂಚಮಸಾಲಿ ಸಮುದಾಯಕ್ಕೆ 2 ಎ ಕೊಟ್ಟರೆ ಸಾಕು ಇಂಥ ನೂರಾರು ಅಧಿಕಾರಿಗಳನ್ನು ತಯಾರು ಮಾಡುತ್ತೇವೆ ಎಂದರು.

ಎಲ್ಲಾ ಲಿಂಗಾಯತ ಶಾಸಕರ ಧ್ವನಿಯಾಗಿ ಶಾಮನೂರು ಮಾತನಾಡಿದ್ದಾರೆ. ಆ ಧ್ವನಿಯನ್ನು ನಿಭಾಯಿಸುವ ಕೆಲಸ ಸರ್ಕಾರ ಮಾಡಬೇಕು. ಶಾಮನೂರು ಅವರು ಮಾತನಾಡುವ ರೀತಿಯಲ್ಲೆ ನಮ್ಮ ಇನ್ನುಳಿದ ಸಚಿವರು‌ ಹಾಗೂ ಶಾಸಕರು ಮಾತನಾಡಿದರೆ ಸಮಸ್ಯೆ ಪರಿಹಾರವಾಗಬಹುದು ಎಂದರು.

ಯಾರು ಪ್ರಾಮಾಣಿಕ ಅಧಿಕಾರಿಗಳು ಇರುತ್ತಾರೊ ಅವರಿಗೆ ಒಳ್ಳೆಯ ಸ್ಥಾನ ನೀಡಲಿ. ನಿಷ್ಕ್ರಿಯ ಅಧಿಕಾರಿಗಳ ವಿರುದ್ದ ಸರ್ಕಾರ ಎನು ಬೇಕಿದರೂ ಕ್ರಮ ಕೈಗೊಳ್ಳಲಿ. ಇದಕ್ಕೂ ಮೊದಲು ಪಂಚಮಸಾಲಿ ‌ಸಮುದಾಯಕ್ಕೆ ಮೀಸಲಾತಿ ‌ನೀಡಲಿ ಎಂದರು.

ಲೋಕಸಭಾ ಚುನಾವಣೆ ಘೋಷಣೆಗೂ‌ ಮೊದಲು ಮೀಸಲಾತಿ ಘೋಷಿಸಬೇಕು. ಇಲ್ಲವಾದರೆ ಹೋರಾಟ ಇನ್ನಷ್ಟು ಚುರುಕುಗೊಳಿಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪಂಚಮಸಾಲಿ ಸಮಾಜ ಪ್ರಮುಖ ಕಾರಣವಾಗಿದೆ. ಯಾವುದೇ ಕಾರಣಕ್ಕೂ ನಮ್ಮ ಸಮಾಜವನ್ನು ನಿರ್ಲಕ್ಷ್ಯ ‌ಮಾಡಬಾರದು. ಈ ಮೂಲಕ ಸಮಾಜದ ಋಣ ತೀರಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.