ADVERTISEMENT

ಸ್ವಯಂ ಪ್ರೇರಣೆಯಿಂದ ಮಾರ್ಗಸೂಚಿ ಪಾಲಿಸಿ: ಅಮರೇಗೌಡ ಬಯ್ಯಾಪುರ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 12:47 IST
Last Updated 23 ಏಪ್ರಿಲ್ 2021, 12:47 IST
ಅಮರೇಗೌಡ ಬಯ್ಯಾಪುರ
ಅಮರೇಗೌಡ ಬಯ್ಯಾಪುರ   

ಕುಷ್ಟಗಿ: ‘ಕೋವಿಡ್‌ ಎರಡನೇ ಅಲೆ ದೇಶದಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ಸರ್ಕಾರ ಮತ್ತು ತಜ್ಞರ ಮಾರ್ಗದರ್ಶನದಂತೆ ಸಾರ್ವಜನಿಕರು ನಿಯಮಗಳನ್ನು ಪಾಲಿಸದಿದ್ದರೆ ಪರಿಸ್ಥಿತಿ ನಿಯಂತ್ರಿಸಲಾರದಷ್ಟು ಕೈಮೀರಿ ಹೋಗಬಹುದು’ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

‘ತಾಲ್ಲೂಕಿನಲ್ಲಿಯೂ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿವೆ. ಆತಂಕದ ವಾತಾವರಣ ಸೃಷ್ಟಿಯಾಗಿದೆ. ತಾಲ್ಲೂಕಿನಲ್ಲಿ ಕಳೆದ ವರ್ಷ 10 ಪ್ರಕರಣಗಳೂ ವರದಿಯಾಗುತ್ತಿರಲಿಲ್ಲ. ಜನರಲ್ಲಿ ಭಯ ಇತ್ತು. ಆದರೆ ಈಗ ಪ್ರತಿನಿತ್ಯ 30ಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ದೇಶದಲ್ಲಿ ಪ್ರತಿದಿನ ಮೂರು ಲಕ್ಷ ಮತ್ತು ರಾಜ್ಯದಲ್ಲಿ 25 ಸಾವಿರಕ್ಕೂ ಅಧಿಕ ಪ್ರಕರಣಗಳು ಹೊಸದಾಗಿ ವರದಿಯಾಗುತ್ತಿದ್ದರೂ ಜನರಲ್ಲಿ ಅದರ ಬಗ್ಗೆ ಗಂಭೀರತೆ ಇಲ್ಲ. ಇದೇ ಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಬಹುದೊಡ್ಡ ದುರಂತ ಸಂಭವಿಸಬಹುದು. ಹಾಗಾಗಿ ಅದಕ್ಕೆ ಅವಕಾಶ ನೀಡದೇ ಸ್ವಯಂ ಪ್ರೇರಣೆಯಿಂದ ಜಾಗೃತರಾಗಿ ಕೋವಿಡ್‌ ನಿಯಮಗಳನ್ನು ಪಾಲಿಸಬೇಕು’ ಎಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

‘ಜಾತ್ರೆಗಳನ್ನು ನಡೆಸಬಾರದು. ಮದುವೆ, ಶವಸಂಸ್ಕಾರದ ವೇಳೆ ಸಾಧ್ಯವಾದಷ್ಟು ಕಡಿಮೆ ಜನ ಸೇರಬೇಕು’ ಎಂದರು.

ADVERTISEMENT

ಜನರ ಆರೋಗ್ಯದ ದೃಷ್ಟಿಯಿಂದ ತರಕಾರಿ ಮಾರುಕಟ್ಟೆಯನ್ನು ಕ್ರೀಡಾಂಗಣಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ವ್ಯಾಪಾರಿಗಳಿಗೆ ತೊಂದರೆಯಾಗುತ್ತದೆ ಎಂಬುದು ಮುಖ್ಯ ಎನಿಸುವುದಿಲ್ಲ ಎಂಬುದನ್ನು ಶಾಸಕ ಪುನರುಚ್ಚರಿಸಿದರು.

ನಿರ್ಲಕ್ಷ್ಯ: ಕೋವಿಡ್‌ ಎರಡನೇ ಅಲೆ ಹೆಚ್ಚುತ್ತಿದೆ ಎಂಬುದರ ಬಗ್ಗೆ ತಜ್ಞರು ನೀಡಿದ ವರದಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರಂಭದಲ್ಲಿ ನಿರ್ಲಕ್ಷಿಸಿದ ಪರಿಣಾಮವಾಗಿ ಈಗ ಪ್ರಕರಣಗಳ ಸಂಖ್ಯೆ ಮಿತಿಮೀರುತ್ತಿದೆ ಎಂದು ಆರೋಪಿಸಿದ ಶಾಸಕ ಬಯ್ಯಾಪುರ, ನಮ್ಮಲ್ಲಿಯೇ ಕೊರತೆ ಎದುರಾಗಿದ್ದರೂ ಬೇರೆ ದೇಶಗಳಿಗೆ ಲಸಿಕೆ ರಫ್ತು ಮಾಡಿದ್ದು ಸರಿಯಲ್ಲ ಎಂದು ಕೇಂದ್ರದ ನೀತಿಯನ್ನು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.