ಕೊಪ್ಪಳ: ರಾಜ್ಯದಲ್ಲಿನ ಮಕ್ಕಳ ಹಕ್ಕುಗಳಿಗೆ ಧಕ್ಕೆ ಉಂಟಾದರೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಜೊತೆಗೆ ಸಾರ್ವಜನಿಕರು ಸಹ ನೆರವಿಗೆ ಧಾವಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ.ಆಂಥೋಣಿ ಸಬಾಸ್ಟಿನ್ ಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾಡಳಿತದ ಆಡಿಟೋರಿಯಂ ಸಭಾಂಗಣದಲ್ಲಿ ಶುಕ್ರವಾರ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕೋವಿಡ್ ವೇಳೆ ಮಕ್ಕಳ ಮೇಲಾಗಿರುವ ಪರಿಣಾಮಗಳ ಕುರಿತು ವಿಭಾಗೀಯ ಮಟ್ಟದ ಮಕ್ಕಳ, ಸಾರ್ವಜನಿಕ ಅಹವಾಲು ಸ್ವೀಕಾರ ಸಭೆ(ಬಳ್ಳಾರಿ ವಿಭಾಗ) ಉದ್ಘಾಟಿಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮದಿಂದ ಮಕ್ಕಳಿಗೆ ಶಿಕ್ಷಣ, ಮೂಲಸೌಕರ್ಯ, ಆರೋಗ್ಯ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ಆಯೋಗದ ಸದಸ್ಯ ರಾಘವೇಂದ್ರ ಎಚ್.ಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೊರೊನಾದಿಂದ ಮಕ್ಕಳ ಜೀವನದಲ್ಲಿ ಗಂಭೀರ ಪರಿಣಾಮಗಳು ಉಂಟಾಗಿವೆ. ಕೆಲ ಮಕ್ಕಳು ಪೋಷಕರನ್ನು ಕಳೆದುಕೊಂಡರೆ ಇನ್ನು ಕೆಲ ಮಕ್ಕಳು ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯದಿಂದ ದೂರವಾಗಿದ್ದಾರೆ. ಅಪೌಷ್ಟಿಕತೆ, ಬಾಲ ಕಾರ್ಮಿಕ ಪದ್ಧತಿಗೆ ಒಳಗಾಗಿ, ಬಾಲ್ಯ ವಿವಾಹ, ಇತರೆ ದೌರ್ಜನ್ಯಗಳಿಗೆ ಸಿಲುಕಿ ಮಕ್ಕಳು ಜೀವನವನ್ನ ಕಳೆದುಕೊಂಡಿದ್ದಾರೆ. ಆಯೋಗ ಅಂತಹ ಮಕ್ಕಳನ್ನು ಗುರುತಿಸಿ, ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಸರ್ಕಾರಿ ಇಲಾಖೆಗಳ ಮೂಲಕ ಒದಗಿಸುತ್ತದೆ ಎಂದರು.
ಮಕ್ಕಳ ಗ್ರಾಮ ಸಭೆ ಕುರಿತ ಕೈಪಿಡಿ ಹಾಗೂ ಬಳ್ಳಾರಿಯ ವರ್ಲ್ಡ್ ವಿಷನ್ ಆರ್ಗನೈಸೇಷನ್ನ ‘ಟೂ ಯಂಗ್ ಟೂ ಮ್ಯಾರಿ’ ಕೈಪಿಡಿ ಬಿಡುಗಡೆ ಮಾಡಲಾಯಿತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಎಲ್ಪಿಒ ಶಿವಲೀಲಾ ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.
ಬಳ್ಳಾರಿ, ಕೊಪ್ಪಳ, ಗದಗ, ವಿಜಯನಗರ ಹಾಗೂ ಚಿತ್ರದುರ್ಗ ಜಿಲ್ಲೆಯ ಮಕ್ಕಳು ಶಾಲಾ ಶೌಚಾಲಯ, ಸಾರಿಗೆ ಸೌಲಭ್ಯ, ಶಾಲಾ ಕಟ್ಟಡಗಳ ದುರಸ್ತಿ, ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ ಮಕ್ಕಳ ಮಾಹಿತಿ, ಅಪಘಾತದಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದ ಬಾಲಕಿಗೆ ಪರಿಹಾರ ಒದಗಿಸುವಂತೆ ಅಹವಾಲು ನೀಡಿದರು.
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿ.ಪಂ ಸಿಒ ಬಿ.ಫೌಜಿಯಾ ತರನ್ನುಮ್, ಎಸ್ಪಿ ಟಿ.ಶ್ರೀಧರ್, ಆಯೋಗದ ಸದಸ್ಯ ಅಶೋಕ ಜಿ.ಯರಗಟ್ಟಿ, ಪರಶುರಾಮ ಎಂ.ಎಲ್, ಶಂಕರಪ್ಪ ಡಿ, ಜಿಲ್ಲಾ ಡಿವೈಎಸ್ಪಿ ಗೀತಾ ಬೇನಾಳ, ಯುನಿಸೆಫ್ನ ಮಕ್ಕಳ ರಕ್ಷಣಾ ಯೋಜನೆಯ ವಿಭಾಗೀಯ ಸಂಯೋಜಕ ಕೆ.ರಾಘವೇಂದ್ರ ಭಟ್, ಸಂಯೋಜಕ ಹರೀಶ್ ಜೋಗಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಮಕ್ಕಳು ಇದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಅಕ್ಕಮಹಾದೇವಿ
ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.