ಕೊಪ್ಪಳ: ಕಟ್ಟಡ ಕಾರ್ಮಿಕರಿಗೆ ಮಂಜೂರಾದ ವಿವಿಧ ಸೌಲಭ್ಯಗಳ ಸಹಾಯಧನವನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಕಟ್ಟಡ ಕಟ್ಟುವ, ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಂಘಟನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಸಿಐಟಿಯು ನೇತೃತ್ವದಲ್ಲಿ ಸೋಮವಾರ ಇಲ್ಲಿನ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದರು.
ಸಂಘಟನೆಯ ಮುಖಂಡರು ಮಾತನಾಡಿ ಎಲ್ಲ ಕಾರ್ಮಿಕರಿಗೆ ಮನೆಕಟ್ಟಲು ₹5 ಲಕ್ಷ ಸಹಾಯ ಧನ ಮಂಜೂರು ಮಾಡಬೇಕು, ಬಾಕಿ ಇರುವ ಶೈಕ್ಷಣಿಕ ಧನಸಹಾಯದ ಅರ್ಜಿಗಳಿಗೆ ಹಣ ನೀಡಬೇಕು, ಕಟ್ಟಡ ಕಾರ್ಮಿಕರ ನೈಜತೆಯನ್ನು ಪರಿಶೀಲಿಸದೇ ಕೇವಲ ಕುಟುಂಬ ಆ್ಯಪ್ ಪರಿಗಣಿಸಿ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿದ ಕಾರ್ಮಿಕರ ಅರ್ಜಿಗಳನ್ನು ತಿರಸ್ಕಾರ ಮಾಡಿರುವುದು ಸರಿಯಲ್ಲ. ಸರಿಯಾಗಿ ಅರ್ಜಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅರ್ಜಿಗಳ ವಿಲೇವಾರಿ ತಪ್ಪಿಸಲು ಪ್ರತಿ ಅರ್ಜಿಗೂ ಸಂಖ್ಯೆಯನ್ನು ನೀಡಿ ಹಿರಿತನದ ಆಧಾರದಲ್ಲಿ ಅರ್ಜಿ ವಿಲೇವಾರಿ ಮಾಡಬೇಕು, ವಿನಾಕಾರಣ ಅರ್ಜಿಗಳನ್ನು ತಿರಸ್ಕರಿಸುವುದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಶಾಸಕ ರಾಘವೇಂದ್ರ ಹಿಟ್ನಾಳ ಮನವಿ ಸ್ವೀಕರಿಸಿ ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ಕ್ರಮ ಕೈಗೊಳ್ಳುವೆ ಎಂದು ಭರವಸೆ ನೀಡಿದರು.
ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಕಾಸೀಂ ಸರ್ದಾರ್, ಮುಖಂಡರಾದ ಜಿ. ನಾಗರಾಜ್, ದೊಡ್ಡನಗೌಡ ಪಾಟೀಲ್, ಶಿವನುಗೌಡ ಜಂಗೀರಸಾಬ್, ಶಶಿಕಲಾ, ಸಾವಿತ್ರಿ, ಹನುಮೇಶ ಚಾನ್, ಪಾಷಾ ಮೆಹಬೂಬ್, ಸುಂಕಪ್ಪ ಗದಗ, ದಫೇದಾರ್ ಶೆಕ್ಷಾವಲಿ, ವಾಸೀಂ ಚೌಗಡ್, ದುರ್ಗಮ್ಮ, ಹುಸೇನಬಾಷಾ ಮಹಿಬೂಬ್ ಮುಲ್ಲಾ, ಶಿವಾನಂದಪ್ಪ ಬಾರ್ಕೆರ, ಮುತ್ತುಸಾಬ್ ಬೆಟಗೇರಿ, ತಾಜುದ್ದೀನ್ ಬೆಳಗಟ್ಟಿ, ಯಾಕೊ ಬೆಳಗಟ್ಟಿ, ಅಲ್ಲಾಬಿ ಹ್ಯಾಟಿ, ಶೇಕುಸಾಬ್ ಹ್ಯಾಟಿ, ಯಮನೂರ ಬೆಟಗೇರಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.