ADVERTISEMENT

ಭತ್ತದ ರಾಶಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 9 ಮೇ 2022, 3:06 IST
Last Updated 9 ಮೇ 2022, 3:06 IST
ಕೊಪ್ಪಳ ತಾಲ್ಲೂಕಿನಲ್ಲಿ ಭಾನುವಾರ ಮಧ್ಯಾಹ್ನ ಸುರಿದ ಬಿರುಗಾಳಿ ಮಳೆಯಿಂದಾಗಿ ಭತ್ತದ ರಾಶಿಗೆ ನೀರು ನುಗ್ಗಿದೆ
ಕೊಪ್ಪಳ ತಾಲ್ಲೂಕಿನಲ್ಲಿ ಭಾನುವಾರ ಮಧ್ಯಾಹ್ನ ಸುರಿದ ಬಿರುಗಾಳಿ ಮಳೆಯಿಂದಾಗಿ ಭತ್ತದ ರಾಶಿಗೆ ನೀರು ನುಗ್ಗಿದೆ   

ಕೊಪ್ಪಳ: ತಾಲ್ಲೂಕಿನಲ್ಲಿ ಭಾನುವಾರ ಮಧ್ಯಾಹ್ನ ಸುರಿದ ಬಿರುಗಾಳಿ ಮಳೆಯಿಂದಾಗಿ ಭತ್ತದ ರಾಶಿಗೆ ನೀರು ನುಗ್ಗಿದ್ದು, ಬೆಳೆಗಾರರಿಗೆ ಆತಂಕ ಎದುರಾಗಿದೆ.

ಹೊಲದಲ್ಲಿ ರಾಶಿ ಮಾಡಿ ಹಾಕಲಾಗಿದೆ. ಭಾನುವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ಗುಡುಗು ಮಿಶ್ರಿತ ಗಾಳಿ ಮಳೆಯಿಂದ ನೀರು ರಾಶಿಗೆ ನುಗ್ಗಿವೆ. ಇದು ರೈತರನ್ನು ಚಿಂತೆಗೀಡು ಮಾಡಿದೆ. ಸಾಲ ಮಾಡಿ ಬೆಳೆದಿದ್ದ ಬೆಳೆಗೆ ಬೆಲೆ ಇಲ್ಲದೆ ಬಿಸಿಲಿಗೆ ಒಣಗಿಸುವ ಕಾರ್ಯ ನಡೆದಿದೆ. ಕೆಲ ರೈತರು ತೂಕ ಮಾಡಿಸುತ್ತಿದ್ದರು. ಹೀಗೆ ಏಕಾಏಕಿಯಾಗಿ ಬಿರುಗಾಳಿ ಸಹಿತ ಮಳೆ ಬಿದ್ದಿದ್ದು, ಅಪಾರ ಪ್ರಮಾಣದ ಬೆಳೆ ಹಾಳಾಗಿದೆ, ಇನ್ನೂ ಕೊಯಿಲು ಆಗದ ಭತ್ತ ಹಾಳಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನ ಹುಲಿಗಿ, ಅಂಗಳಕೇರಿ, ಹಿಟ್ನಾಳ, ಇಂದ್ರಗಿ, ಶಿವಪುರ, ಬಂಡಿ ಹರ್ಲಾಪುರ, ಬಸಾಪುರ, ಬೂದಗುಂಪ, ನಾರಾಯಣ ಪೇಟೆ ಮಹ್ಮದನಗರ ಮತ್ತಿತರ ಹಳ್ಳಿಗಳಲ್ಲಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಯಾಗಿದೆ.

ADVERTISEMENT

ಇನ್ನೊಂದು ಕಡೆ ರೈತರ ಮಾವಿನ ತೋಟದಲ್ಲಿ ಬಿರುಗಾಳಿಗೆ ರಾಶಿ ರಾಶಿ ಹಣ್ಣುಗಳು ಬಿದ್ದಿದ್ದು, ಮರಗಳು ನೆಲಕ್ಕುರುಳಿವೆ. ಹಳೇ ಬಂಡಿಹರ್ಲಾಪುರ ಗ್ರಾಮದ ರೈತ ಹನುಮೇಶ ದಳಪತಿ ಎಂಬುವರ 5 ಎಕರೆ ಪ್ರದೇಶದಲ್ಲಿ ಭತ್ತ ಮಾವು,‌‌‌‌ ಸಪೋಟ, ತೆಂಗು
ಬೆಳೆದಿದ್ದು, ₹5 ಲಕ್ಷಕ್ಕೂ ಅಧಿಕ ಹಾನಿಯಾಗಿದೆ. ಹಿಟ್ನಾಳ ಭಾಗದಲ್ಲಿ ಸುಮಾರು 3 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ನೀರು ಪಾಲಾಗಿದೆ. ಅಧಿಕಾರಿಗಳು ಬಂದು ಪರಿಶೀಲನೆ ಮಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶಿವಣ್ಣ ಚಲಸಾನಿ ಅಭಿಪ್ರಾಯ ಒತ್ತಾಯಿಸಿದ್ದಾರೆ.

ಸಿಡಿಲು ಬಡಿದು ರೈತ ಸಾವು

ಮುನಿರಾಬಾದ್: ಸಮೀಪದ ಇಂದರಗಿ ಗ್ರಾಮದ ರೈತ ಶಿವಪ್ಪ ಇಂದ್ರಪ್ಪ ಕಾಸನಕಂಡಿ (67) ಭಾನುವಾರ ಸಂಜೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸಂಜೆ ಬಿರುಗಾಳಿ ಸಹಿತ ಮಳೆಯಾಗಿದೆ. ಈ ಸಂದರ್ಭದಲ್ಲಿ ಶೇಂಗಾ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಶಿವಪ್ಪ ಸಿಡಿಲಿನ ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಮುನಿರಾಬಾದ್ ಠಾಣೆಯ ಪೊಲೀಸರು
ತಿಳಿಸಿದ್ದಾರೆ. ತಹಶೀಲ್ದಾರ್ ವಿಠ್ಠಲ್ ಚೌಗುಲೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.