ಕನಕಗಿರಿ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೋಮವಾರ ರಾತ್ರಿ ಸುರಿದ ಮಳೆ, ಹಾಗೂ ರಭಸವಾದ ಗಾಳಿಗೆ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ.
ಗೌಸುಸಾಬ ಗುರಿಕಾರ ಅವರ ತೋಟದ ಪರಿಸರದಲ್ಲಿರುವ ಒಟ್ಟು 30 ಎಕರೆ ಪಪ್ಪಾಯ ಬೆಳೆ ನಾಶವಾಗಿದೆ. ಬೊಮ್ಮಚಿಹಾಳ ಗ್ರಾಮದರಂಗರಾವ್ ಅವರಿಗೆ ಸೇರಿದ ನಾಲ್ಕು ಎಕರೆ ದಾಳಿಂಬೆ, ಕಲಕೇರಿಯ ರೈತ ಪಾರ್ವತೆಪ್ಪ ಅವರಿಗೆ ಸೇರಿದ ಮೂರು ಎಕರೆ ಪಪ್ಪಾಯ ಬೆಳೆ ಸಹ ನೆಲಕ್ಕೆ ಉರುಳಿದೆ.
ನೀರಲೂಟ ಗ್ರಾಮದಲ್ಲಿ ಗಾಳಿಯ ಹೊಡೆತಕ್ಕೆ ವಿದ್ಯುತ್ ಕಂಬ, ಗಿಡ ಮರಗಳು ನೆಲಕ್ಕೆ ಬಿದ್ದಿದ್ದು, ಮನೆಯ ಮೇಲ್ಛಾವಣಿಗೆ ಹಾಕಿದ ತಗಡುಗಳು ಹಾರಿ ಹೋಗಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.
ವಿವಿಧ ಬ್ಯಾಂಕ್ಗಳಲ್ಲಿ ಸಾಲ ಮಾಡಿ ಬೆಳೆ ಬೆಳೆಯಲಾಗಿತ್ತು. ಲಾಭದ ನಿರೀಕ್ಷೆಯಲ್ಲಿದ್ದೆ. ಗಾಳಿ, ಮಳೆ ಬೆಳೆಯನ್ನು ನುಂಗಿ ಹಾಕಿದೆ. ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ ಎಂದು ಗೌಸುಸಾಬ ಗುರಿಕಾರ ಅಳಲು ತೋಡಿಕೊಂಡರು.
ವಿವಿಧ ರೈತರ ತೋಟಗಳಿಗೆ ತಹಶೀಲ್ದಾರ್ ರವಿ ಅಂಗಡಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಿವಯೋಗಿ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು ರಭಸವಾದ ಗಾಳಿಗೆ ತಾಲ್ಲೂಕಿನಲ್ಲಿ ಬೆಳೆದ ಪಪ್ಪಾಯ, ದಾಳಿಂಬೆ, ಮಾವು ಹಾಗೂ ಬಾಳೆ ಸೇರಿ 250 ಎಕರೆ ತೋಟಗಾರಿಕೆ ಬೆಳೆ ನಾಶವಾಗಿದೆ. ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದು,ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದರು.
ದಿಶಾ ನಿರ್ದೇಶಕ ಹನುಮೇಶ ಯಲಬುರ್ಗಿ, ಕಂದಾಯ, ತೋಟಗಾರಿಕೆಯ ಇಲಾಖೆಯ ಅಧಿಕಾರಿಗಳು, ವಿವಿಧ ಪಕ್ಷದ ಮುಖಂಡರು ಭೇಟಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.