ಗಂಗಾವತಿ: ‘ಕೃಷಿ ಪ್ರಧಾನ ಭಾರತದಲ್ಲಿ ಸಹಕಾರ ಕ್ಷೇತ್ರವು ರೈತರಿಗೆ ಸಾಕಷ್ಟು ಸಹಕಾರಿಯಾಗಿದ್ದು, ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ’ ಎಂದು ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ನಗರದ ಕನಕಗಿರಿ ರಸ್ತೆಯಲ್ಲಿನ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ಪ್ರಾಂತೀಯ ಕಚೇರಿಯಿಂದ ಗುರುವಾರ ನಡೆದ ಸೌಹಾರ್ದ ಸಹಕಾರ ಕಾಯ್ದೆಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
‘ಸಹಕಾರ ಕ್ಷೇತ್ರ 25 ವರ್ಷಗಳ ಹಿಂದೆ ಕೆಲವರ ಕಪಿಮುಷ್ಠಿಯಲ್ಲಿತ್ತು. ಕಾಯ್ದೆ ಜಾರಿ ನಂತರ ಸಹಕಾರ ಕ್ಷೇತ್ರ ಜನಸಾಮಾನ್ಯರ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಕಾಯ್ದೆಯಿಂದ ಸಹಕಾರಿ ಕ್ಷೇತ್ರದಲ್ಲಿ ಮಹಿಳೆಯರು, ಯುವಜನಾಂಗ ಪಾಲ್ಗೊಳ್ಳುವಿಕೆ ಬಳಿಕ ಸಾಕಷ್ಟು ಬದಲಾವಣೆ ಕಂಡಿದೆ. ಎಲ್ಲರೂ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಸಣ್ಣಪಟ್ಟಣಗಳಲ್ಲಿ ಸಹ ಹತ್ತಾರು ಸಹಕಾರ ಶಾಖೆಗಳು ಕಾಣಬಹುದಾಗಿದೆ. ಗ್ರಾಮೀಣ ಭಾಗಗಳಿಂದ ನಗರ ಪ್ರದೇಶಗಳವರಗೆ ಸಹಕಾರ ಶಾಖೆಗಳು ತಮ್ಮದೇ ಪಾತ್ರ ನಿರ್ವಹಿಸುತ್ತಿವೆ. ರೈತರು, ವ್ಯಾಪಾರಿಗಳು, ವರ್ತಕರು, ಮಹಿಳಾ ಸಂಘದವರ ಆರ್ಥಿಕ ಅಭಿವೃದ್ಧಿಗೆ ಸೌಹಾರ್ದ ಸಹಕಾರಿಗಳು ಮುನ್ನುಡಿ ಬರೆಯುತ್ತಿವೆ’ ಎಂದು ಹೇಳಿದರು.
ಸಹಕಾರ ನಿರ್ದೇಶಕ ಜಿ.ಶ್ರೀಧರ ಕೆಸರಹಟ್ಟಿ ಮಾತನಾಡಿ, ಸಹಕಾರ ಹಾಗೂ ಕೃಷಿ ಕ್ಷೇತ್ರಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಸರ್ಕಾರ ಕೃಷಿಗೆ ಆದ್ಯತೆ ನೀಡುವುದರ ಜೊತೆಗೆ ಜನಸಾಮಾನ್ಯರ ಸಂಪರ್ಕ ಸೇತುವೆಯಾಗಿರುವ ಸಹಕಾರಿ ಕ್ಷೇತ್ರವನ್ನು ಸಹ ಪ್ರೋತ್ಸಾಹಿಸಲು ಮುಂದಾಗುತ್ತಿದೆ’ ಎಂದು ಹೇಳಿದರು.
ನಾಗಲಿಂಗಪ್ಪ ಪತ್ತಾರ, ಯಂಜೇರಪ್ಪ, ಕುಮಾರಪ್ಪ ಸಿಂಗನಾಳ, ಲೋಕೇಶ, ಸೂರ್ಯಕಾಂತ ರಾಕಲೆ, ಓಂಕಾರ ಸೇರಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.