ADVERTISEMENT

ಗ್ರಂಥಾಲಯಗಳಲ್ಲಿ ಎಸ್‌ಟಿಇಎಂ ಯೋಜನೆ

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೌಜಿಯಾ ತರನುಮ್

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 2:05 IST
Last Updated 23 ಜೂನ್ 2022, 2:05 IST
ಕೊಪ್ಪಳ ಜಿಲ್ಲಾ ಪಂಚಾಯ್ತಿ ಸಿಇಒ ಬಿ. ಫೌಜಿಯಾ ತರನುಮ್ ಎಸ್‌ಟಿಇ (ಎ)ಎಂ ಯೋಜನೆಯ ಕಿಟ್‌ಗಳನ್ನು ವಿತರಿಸಿದರು
ಕೊಪ್ಪಳ ಜಿಲ್ಲಾ ಪಂಚಾಯ್ತಿ ಸಿಇಒ ಬಿ. ಫೌಜಿಯಾ ತರನುಮ್ ಎಸ್‌ಟಿಇ (ಎ)ಎಂ ಯೋಜನೆಯ ಕಿಟ್‌ಗಳನ್ನು ವಿತರಿಸಿದರು   

ಕೊಪ್ಪಳ: ಜಿಲ್ಲೆಯ ಆಯ್ದ 20 ಗ್ರಂಥಾಲಯಗಳಲ್ಲಿ ಎಸ್‌ಟಿಇ (ಎ)ಎಂ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ಪ್ರತಿ ಗ್ರಂಥಾಲಯಗಳಲ್ಲಿ ಸುಮಾರು 100 ವಿದ್ಯಾರ್ಥಿಗಳ ಹೆಸರು ನೋಂದಾಯಿಸಿ ಅವರಿಗೆ ಶಿಕ್ಷಣ ನೀಡಲಾಗುತ್ತದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ. ಫೌಜಿಯಾ ತರನುಮ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಬೆಂಗಳೂರಿನ ಯುವಚಿಂತನ ಫೌಂಡೇಷನ್ ಮತ್ತು ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆ ಸಹಯೋಗದಲ್ಲಿ ನಗರದ ಕೃಷಿ ವಿಸ್ತರಣಾ ಕೇಂದ್ರದಲ್ಲಿ ನಡೆದ ಜಿಲ್ಲೆಯ ಆಯ್ದ 20 ಗ್ರಂಥಾಲಯಗಳ ಮೇಲ್ವಿಚಾರಕರಿಗೆ ಹಾಗೂ ಪ್ರತಿ ಗ್ರಂಥಾಲಯದ ಹತ್ತಿರವಿರುವ ಶಾಲೆಯ 20 ಶಾಲಾ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೋವಿಡ್ ಸಾಂಕ್ರ‍್ರಾಮಿಕದಿಂದ ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಉಂಟಾಗಿದ್ದು, ಅವರ ಶಿಕ್ಷಣ ಮಟ್ಟವನ್ನು ಉನ್ನತೀಕರಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಅವುಗಳಲ್ಲಿ ಗ್ರಂಥಾಲಯಗಳ ಉನ್ನತೀಕರಣ ಪ್ರಮುಖ ಕಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಓದುವ ಬೆಳಕು ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ಈ ಗ್ರಂಥಾಲಯಗಳ ಮೇಲ್ವಿಚಾರಕರು ಕಲಿಕೆಯ ಕೌಶಲ ಅಳವಡಿಸಿಕೊಂಡು ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಪಾಡಾಗುತ್ತಿರುವುದು ಹೆಮ್ಮೆಯ ವಿಚಾರ. ಜಿಲ್ಲೆಯ ಇತರೆ ಗ್ರಂಥಾಲಯಗಳಿಗೂ ಈ ಕಾರ್ಯಕ್ರಮ ವಿಸ್ತರಿಸಲು ಪ್ರಯತ್ನಿಸಲಾಗುವುದು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ವಿವಿಧ ಇಲಾಖೆಗಳ ಸಹಭಾಗಿತ್ವದಿಂದ ಈ ಯೋಜನೆಯ ಅನುಷ್ಠಾನದಲ್ಲಿ ಆಗುತ್ತಿರುವ ತೊಡಕುಗಳ ನಿವಾರಣೆ ಮಾಡಲಾಗುವುದು’ ಎಂದು ಹೇಳಿದರು.

ಪೋಸ್ಟರ್‌ ಬಿಡುಗಡೆ: ಎಸ್‌ಟಿಇ (ಎ) ಎಂ ಯೋಜನೆ ಅಡಿಯಲ್ಲಿ ಕಾರ್ಯಕ್ರಮಕ್ಕೆ ಆಯ್ಕೆಯಾದ 20 ಗ್ರಂಥಾಲಯಗಳಲ್ಲಿ ನೋಂದಣಿಯಾದ ಸುಮಾರು 100 ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸಲು ಅಗತ್ಯವಿರುವ ಉಪಕರಣಗಳನ್ನು ಸಿಇಒ ಅವರು ವಿತರಿಸಿ, ಮನ್ವಂತರ-2 ಕಾರ್ಯಕ್ರಮದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದರು.

ಯುವಚಿಂತನ ಫೌಂಡೇಷನ್‌ ಮುಖ್ಯಸ್ಥ ಅನುಪಮಾ, ಜಿಲ್ಲಾ ಪಂಚಾಯ್ತಿ ಯೋಜನಾ ವಿಭಾಗದ ಅಧಿಕಾರಿ ಕಮಲಯ್ಯ, ಕೊಪ್ಪಳ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ ಮಲ್ಲಿಕಾರ್ಜುನ, ಜಿಲ್ಲಾ ಯುನಿಸೆಫ್ ಸಂಯೋಜಕ ಹರೀಶ್ ಜೋಗಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.