ADVERTISEMENT

ಇನ್ನೂ 5 ಜಯಂತಿ ಆಚರಣೆಗೆ ಪ್ರಸ್ತಾವ ಸರ್ಕಾರದ ಮುಂದಿದೆ: ಸಚಿವ ಸಿ.ಟಿ.ರವಿ

ಸುಧಾಮೂರ್ತಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಟಾಸ್ಕ್ ಫೋರ್ಸ್

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 18:43 IST
Last Updated 5 ನವೆಂಬರ್ 2019, 18:43 IST
ಸಿ.ಟಿ.ರವಿ
ಸಿ.ಟಿ.ರವಿ   

ಕೊಪ್ಪಳ: ರಾಜ್ಯದಲ್ಲಿ ಅನೇಕ ಜಯಂತಿ ಆಚರಿಸುತ್ತಿದ್ದೇವೆ. ಇನ್ನೂ 5 ಜಯಂತಿ ಆಚರಣೆಯ ಪ್ರಸ್ತಾವ ಸರ್ಕಾರದ ಮುಂದಿದೆ. ಹಾಗಾಗಿ ಈ ಎಲ್ಲ ಜಯಂತಿ ಆಚರಿಸಬೇಕೋ, ಬೇಡವೋ ಎನ್ನುವ ಬಗ್ಗೆ ಸರ್ವಪಕ್ಷಗಳ ಸಭೆ ನಡೆಸಿ ಅಭಿಪ್ರಾಯಪಡುತ್ತೇವೆಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹನೀಯರ ಜಯಂತಿ ಆಚರಣೆಗಳು ಕೇವಲ ಜಾತಿಗೆ ಸೀಮಿತವಾಗುತ್ತಿದ್ದು, ಇದರಿಂದ ಮಹನೀಯರಿಗೆ ಅಪಮಾನ ಮಾಡಿದಂತೆ ಆಗುತ್ತದೆ. ಹಾಗಾಗಿ ಜಯಂತಿಗಳನ್ನು ಏಕೆ ಆಚರಿಸಬೇಕು‌ ಮತ್ತು ಜಯಂತಿ ಆಚರಣೆ ಸ್ವರೂಪ ಹೇಗಿರಬೇಕು ಎನ್ನುವ ಕುರಿತು ಸಮುದಾಯದ ಮುಖಂಡರು ಮತ್ತು ಸರ್ವಪಕ್ಷಗಳ ಸಭೆ ಕರೆದು, ಚರ್ಚಿಸಿ, ತೀರ್ಮಾನಿಸಲಾಗುವುದು ಎಂದರು.

ಅಂತರರಾಜ್ಯ ಮತ್ತು ರಾಷ್ಟ್ರದ ಜನರನ್ನು ಸೆಳೆಯುವ ಉದ್ದೇಶದಿಂದಾಗಿ ರಾಜ್ಯದಲ್ಲಿ 25 ಸಾವಿರಕ್ಕೂ ಹೆಚ್ಚು ಪ್ರವಾಸಿತಾಣಗಳಿವೆ. ಅವುಗಳನ್ನು ಗುರುತಿಸಿ, ಅಭಿವೃದ್ಧಿ ಪಡಿಸಲಾಗುತ್ತದೆ. ಸಂಪರ್ಕ, ಹೊಟೇಲ್‌ ವ್ಯವಸ್ಥೆ ಮತ್ತು ಕ್ರಿಯಾಶೀಲತೆ ಈ ಮೂರು ವಿಷಯಗಳ ಆಧಾರದಲ್ಲಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಬೇಕು. ಬೇಸಾಯ ಮತ್ತು ಆಯಾ ಭಾಗದ ಆಹಾರ ಪದ್ಧತಿ ಸಂಸ್ಕೃತಿಯನ್ನು ಪರಿಚಯಿಸುವ ಮೂಲಕ ಪ್ರವಾಸಿಗರಿಗೆ ಹಳ್ಳಿಯ ಜೀವನಾನುಭವ ನೀಡುವ ಉದ್ದೇಶ ಹೊಂದಿದ್ದೇವೆ ಎಂದರು.

ADVERTISEMENT

ರಾಮಾಯಣ, ಶಿಲಾಯುಗ, ಜೈನ, ಬೌದ್ಧ ಧರ್ಮ ಹಾಗೂ ಅನೇಕ ರಾಜಮನೆತನಗಳು ಆಳಿದ ಜಿಲ್ಲೆ ಇದಾಗಿದ್ದು, ರಾಜ್ಯಮಟ್ಟದಲ್ಲಿ 7, ಜಿಲ್ಲಾ ಮಟ್ಟದ 3 ಸೇರಿ ಒಟ್ಟು 10 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಪ್ರವಾಸೋದ್ಯಮದ ಅಭಿವೃದ್ಧಿಗೆ ಸುಧಾಮೂರ್ತಿ ಅವರ ಅಧ್ಯಕ್ಷತೆ ಯಲ್ಲಿ ರಾಜ್ಯಮಟ್ಟದ ಟಾಸ್ಕ್ ಫೋರ್ಸ್ ನಿರ್ಮಿಸಲು ತಜ್ಞರ ಸಮಿತಿ ರಚಿಸ ಲಾಗುತ್ತಿದೆ‌ ಎಂದರು. ಶಾಸಕರಾದ ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.