ಕನಕಗಿರಿ: ಪಟ್ಟಣದ ಸುಳೇಕಲ್ ಹಾಗೂ ರೆಡ್ಡೇರ ಓಣಿಗೆ ಹೊಂದಿಕೊಂಡಿರುವ ಸಾರ್ವಜನಿಕ ಶೌಚಾಲಯ ಸ್ವಚ್ಛ ಮಾಡಬೇಕು ಎಂದು ಒತ್ತಾಯಿಸಿ ಮಹಿಳೆಯರು ಪಟ್ಟಣ ಪಂಚಾಯಿತಿ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮಹಿಳಾ ಮುಂದಾಳುಗಳಾದ ಷರೀಫಾ, ಪಚ್ಚೆಮ್ಮ ಕುಂಬಾರ, ಹೊನ್ನೂರುಬೀ, ಮಮತಾಜ್ ಬೇಗಂ ಗಂಗಾವತಿ, ಲಕ್ಷ್ಮೀದೇವಿ ಮಾತನಾಡಿ,‘ಪಟ್ಟಣದ ಕೆಲ ವಾರ್ಡ್ಗಳ ಮಹಿಳೆಯರು ಅನೇಕ ವರ್ಷಗಳಿಂದ ಈ ಶೌಚಾಲಯ ಬಳಕೆ ಮಾಡುತ್ತಿದ್ದು, ಕಳೆದ ಒಂದು ವರ್ಷದಿಂದಲೂ ಜಾಲಿ ಬೆಳೆದು ತೊಂದರೆಯಾಗಿದೆ. ಈಚೆಗೆ ಮಳೆ ನೀರು ನಿಂತು ಸಮಸ್ಯೆ ಉಂಟಾಗಿದೆ’ ಎಂದು ಅವರು ಹೇಳಿದರು.
ಅನೇಕ ಸಲ ಮನವಿ ಮಾಡಿದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದೂ ಅವರು ದೂರಿದರು.
ಬೆಳೆದು ನಿಂತಿರುವ ಜಾಲಿ ಗಿಡಗಳನ್ನು ಕಡಿದು ಹಾಕಬೇಕು. ಗಲೀಜು ನೀರು ಬೇರೆಡೆಗೆ ಹರಿಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ತ್ವರಿತ ಗತಿಯಲ್ಲಿ ಈ ಕೆಲಸ ಮಾಡದಿದ್ದರೆ ಮತ್ತೊಮ್ಮೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಪ್ರಮುಖರಾದ ಯಂಕಮ್ಮ ಮಾದಿನಾಳ, ಲಕ್ಕಮ್ಮ, ನಾಗಮ್ಮ ಆರೇರ್ ಹಾಗೂ ಶಿವಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.