ADVERTISEMENT

ಅಕ್ರಮ ಗಣಿಗಾರಿಕೆ: ಫೆ.11ರಂದು ಬೈಕ್ ರ್ಯಾಲಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 10:25 IST
Last Updated 8 ಫೆಬ್ರುವರಿ 2011, 10:25 IST

ಮಂಡ್ಯ: ‘ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಪತ್ತೆ ಹಚ್ಚಲು ತನಿಖೆಯನ್ನು ಸಿಒಡಿಗೆ ಒಪ್ಪಿಸಬೇಕು’ ಎಂದು ರೈತ ಸಂಘದ ರಾಜ್ಯ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಅವರು ಆಗ್ರಹಪಡಿಸಿದರು.‘ಜಿಲ್ಲೆಯಲ್ಲಿ ಸುಮಾರು 900 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆದಿದ್ದು, ಬಹಳಷ್ಟು ಮಂದಿ ಲೈಸೆನ್ಸ್ ಇಲ್ಲದೆ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಇದಕ್ಕೆ, ರಾಜಕಾರಣಿಗಳು ಮತ್ತು ಕೆಲ ಅಧಿಕಾರಿಗಳ ಕುಮ್ಮಕ್ಕೂ ಇದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಅಲ್ಲದೆ, ಕೃಷ್ಣರಾಜಸಾಗರ ಜಲಾಶಯ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆದಿರುವುದು ಆತಂಕ ಸೃಷ್ಟಿಸಿದೆ. ಈ ಬಗೆಗೆ ಸರ್ಕಾರದ ಗಮನ ಸೆಳೆಯಲು ಫೆ. 11 ರಂದು ಕೆಆರ್‌ಎಸ್‌ನಿಂದ ಬೈಕ್‌ಗಳ ರ್ಯಾಲಿ ಹೊರಟು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.ಬೇಡಿಕೆಗಳು: ‘ಕನ್ನಂಬಾಡಿ ಜಲಾಶಯ ವ್ಯಾಪ್ತಿಯ 10 ಕಿ.ಮೀ. ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬಾರದು. ಕಳೆದ ಹತ್ತು ವರ್ಷಗಳಿಂದ ಇದೂವರೆಗೂ ಲೈಸೆನ್ಸ್ ಇಲ್ಲದೆ ಅಕ್ರಮ ಗಣಿಗಾರಿಕೆ ನಡೆಸಿದ/ನಡೆಸುತ್ತಿರುವವರ ವಿರುದ್ಧ ಕಠಣ ಕ್ರಮ ಜರುಗಿಸಬೇಕು’ ಎಂದು ಹೇಳಿದರು.

‘ನಮ್ಮ ಚಳವಳಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರ ವಿರುದ್ಧವೇ ವಿನಾಃ ಕಾನೂನು ರೀತ್ಯಾ ಗಣಿಗಾರಿಕೆ ನಡೆಸುತ್ತಿರುವವರು ಅಥವಾ ಸಣ್ಣಪುಟ್ಟ ಉದ್ಯೋಗ ಮಾಡುತ್ತಿರುವವರ ವಿರುದ್ಧ ಅಲ್ಲ’ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.ಟ್ರಾಕ್ಟರ್ ಜಪ್ತಿ, ಸಾಲ ವಸೂಲಾತಿಗೆ ಸಂಬಂಧಿಸಿದಂತೆ ಈ ಕೂಡಲೇ ಜಿಲ್ಲಾಧಿಕಾರಿಗಳು ಇನ್ನು 10 ದಿನಗಳಲ್ಲಿ ಸಭೆ ಕರೆಯಬೇಕು. ಇಲ್ಲದಿದ್ದರೆ, ಪುನಾ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

‘ಬೇಸಾಯವನ್ನೇ ಅವಲಂಬಿಸಿರುವ ಶೇ 70ರಷ್ಟು ಜನರ ಬಗೆಗೆ ಸಾಹಿತ್ಯಸಮ್ಮೇಳನದಲ್ಲಿ ಯಾವುದೇ ನಿರ್ಣಯ ಆಗಿಲ್ಲ. ಇದು, ಸಾಹಿತ್ಯ ಕ್ಷೇತ್ರಕ್ಕೆ ಕಪ್ಪುಚುಕ್ಕೆ. ಅನ್ನದಾತನನ್ನೇ ಸ್ಮರಿಸದಿರುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಅಸಮಾಧಾನ       ವ್ಯಕ್ತಪಡಿಸಿದರು.

ಸಂಸದೀಯ ಜ್ಞಾನವಿಲ್ಲ: ‘ಸಂಸದ ಎನ್.ಚಲುವರಾಯಸ್ವಾಮಿ ಅವರಿಗೆ ಸಂಸದೀಯ ಜ್ಞಾನವಿಲ್ಲ. ಹೀಗಾಗಿ, ನನ್ನನ್ನು ಜೈಲಿಗೆ ಕಳುಹಿಸುವ ಮಾತನ್ನು ಆಡಿದ್ದಾರೆ. ಬಹುಶಃ ರೈತರ ಪರವಾಗಿ ಹೋರಾಟ ಮಾಡಿದ್ದಕ್ಕೆ ಈ ರೀತಿ ಹೇಳಿರಬಹುದು’ ಎಂದು ಅಣಕವಾಡಿದರು. ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಕೋಣಸಾಲೆ ನರಸರಾಜು, ಎಸ್.ಸುರೇಶ್, ಬೊಮ್ಮೇಗೌಡ, ಹನಿಯಂಬಾಡಿ ನಾಗರಾಜು, ಜವರೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.