ADVERTISEMENT

ಅರೆ ಸೇನಾಪಡೆ ಪಥ ಸಂಚಲನ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 4:09 IST
Last Updated 13 ಏಪ್ರಿಲ್ 2013, 4:09 IST

ಶ್ರೀರಂಗಪಟ್ಟಣ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅರೆ ಸೇನಾಪಡೆ ಶುಕ್ರವಾರ ಪಟ್ಟಣ ಹಾಗೂ ಗಂಜಾಂಗಳಲ್ಲಿ ಪಥ ಸಂಚಲನ ನಡೆಸಿತು.
ರಾಜ ಬೀದಿ, ಗೋಸೇಗೌಡರ ಬೀದಿ, ರ‌್ಯಾಂಫೋರ್ಟ್ ರಸ್ತೆ, ಕೋಟೆ  ಮಾರ್ಗ, ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತ ಹಾಗೂ ಗಂಜಾಂಗಳಲ್ಲಿ ಪಥ ಸಂಚಲನ ನಡೆಯಿತು. ಡಿವೈಎಸ್ಪಿ ಕಲಾ ಕೃಷ್ಣಸ್ವಾಮಿ ಪೊಲೀಸ್ ಠಾಣೆ ವೃತ್ತದಲ್ಲಿ ಪಥ ಸಂಚಲನಕ್ಕೆ ಚಾಲನೆ ನೀಡಿ ತಾವೂ ಹೆಜ್ಜೆ ಹಾಕಿದರು.

ಚುನಾವಣೆ ಮುಗಿಯುವವರೆಗೆ ಅರೆ ಸೇನಾ ತುಕಡಿ ಪಟ್ಟಣದಲ್ಲಿ ವಾಸ್ತವ್ಯ ಹೂಡಲಿದೆ. 85 ಜನರ ತುಕಡಿ ಇಲ್ಲಿಗೆ ಬಂದಿದ್ದು, ಅಗತ್ಯ ಇರುವ ಕಡೆ ಗಸ್ತು ಹಾಕಲಾಗುವುದು. ಕ್ಷೇತ್ರದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಸ್ಥಳೀಯ ಪೊಲೀಸರ ಜತೆ ಈ ತುಕಡಿ ಕೂಡ ಕಾರ್ಯ ನಿರ್ವಹಿಸಲಿದೆ. ಜನರಲ್ಲಿ ಅಭದ್ರತೆಯ ವಾತಾವರಣ ದೂರ ಮಾಡಲು ಅರೆಸೇನಾ ತುಕಡಿ ಕರೆಸಲಾಗಿದೆ ಎಂದು ಇನ್‌ಸ್ಪೆಕ್ಟರ್ ಕೆ.ಆರ್.ಪ್ರಸಾದ್ ತಿಳಿಸಿದರು. ಸಬ್‌ಇನ್‌ಸ್ಪೆಕ್ಟರ್‌ಗಳಾದ ಬಿ.ಜಿ.ಕುಮಾರ್, ಮಂಜು ಇದ್ದರು.

ಸಕಲ ಸಿದ್ಧತೆ
ಕೃಷ್ಣರಾಜಪೇಟೆ: ಶಾಂತಿಯುತವಾಗಿ ವಿಧಾನಸಭೆ ಚುನಾವಣೆ ನಡೆಸುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿನ ವ್ಯಾಪಕ ಬಂದೋಬಸ್ತ್‌ಗಾಗಿ ಅರೆಸೇನಾ ಪಡೆಯನ್ನು ತಾಲ್ಲೂಕಿಗೆ ನಿಯೋಜಿಸಲಾಗಿದ್ದು, ನೂರು ಜನ ಯೋಧರ ತಂಡ ತಾಲ್ಲೂಕಿಗೆ ಶುಕ್ರವಾರ ಆಗಮಿಸಿದೆ. ತಹಶೀಲ್ದಾರ್ ಅಹೋಬಲಯ್ಯ, ಸರ್ಕಲ್ ಇನ್‌ಸ್ಪೆಕ್ಟರ್ ಸಂದೇಶ್ ಕುಮಾರ್ ಇತರರು ತಂಡವನ್ನು ಬರಮಾಡಿಕೊಂಡರು.

ಪ್ರತಿ ಹೋಬಳಿ ಕೇಂದ್ರಗಳಲ್ಲೂ ಅರೆಸೇನಾ ಪಡೆಯು ಪಥ ಸಂಚಲನ ನಡೆಸುವ ಮೂಲಕ ಮತದಾರರಲ್ಲಿ ಸ್ಥೈರ್ಯ ತುಂಬಲಿದೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ತಾಲ್ಲೂಕು ಆಡಳಿತ ಸಂಕಲ್ಪ ಮಾಡಿದ್ದು, ಸಾರ್ವಜನಿಕರು ಬೆಂಬಲ ನೀಡಬೇಕು. ತಮ್ಮ ವ್ಯಾಪ್ತಿಯಲ್ಲಿ ಕಂಡುಬರುವ ಅಕ್ರಮ ಮದ್ಯ ದಾಸ್ತಾನು, ಭೋಜನಕೂಟ, ಹಣ ಹಂಚಿಕೆ, ಯಾವುದೇ ಆಮೀಷ ಒಡ್ಡುವಿಕೆ ಸೇರಿದಂತೆ ಕಾನೂನು ಬಾಹಿರ ಚಟುವಟಕೆಗಳ ಬಗ್ಗೆ ಕೂಡಲೇ ತಾಲ್ಲೂಕು ಆಡಳಿತಕ್ಕೆ ಇಲ್ಲವೇ ಪೋಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.