ADVERTISEMENT

ಎಂಡಿಸಿಸಿ: ಐವರು ನೌಕರರ ಅಮಾನತು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 9:37 IST
Last Updated 2 ಆಗಸ್ಟ್ 2013, 9:37 IST

ಮಂಡ್ಯ:  ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವಂಚನೆ ಮಾಡಿದ್ದ ಜಾಲದ ಸದಸ್ಯರಿಗೆ 2 ಕೋಟಿ ರೂಪಾಯಿ ಹಣ ನೀಡಿದ್ದಕ್ಕೆ ಸಂಬಂಧಿಸಿದಂತೆ ಗುರುವಾರ ನಡೆದ ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆಡಳಿತ ಮಂಡಳಿ ಸಭೆಯಲ್ಲಿ ಐವರು ಸಿಬ್ಬಂದಿಯನ್ನು ಅಮಾನತುಗೊಳಿಸಲು ನಿರ್ಧರಿಸಲಾಗಿದೆ.

ಬ್ಯಾಂಕ್ ಅಧ್ಯಕ್ಷ ಸತೀಶ್ ಗೈರುಹಾಜರಿಯಲ್ಲಿ ಉಪಾಧ್ಯಕ್ಷ ಎ.ಎಂ. ಕೃಷ್ಣೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬ್ಯಾಂಕಿನ ಈಗಿನ ಅಧ್ಯಕ್ಷ, ನಿವೃತ್ತರಾದ ಇಬ್ಬರು ಅಧಿಕಾರಿಗಳಿಗೂ ನೋಟಿಸ್ ಜಾರಿ ಮಾಡಲು ನಿರ್ಣಯಿಸಲಾಯಿತು ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ. ನಿವೃತ್ತರಾಗಿರುವ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಎಲೆ, ಸಹಾಯಕ ವ್ಯವಸ್ಥಾಪಕ ಪ್ರಬಂಧಕ ಶಿವಯ್ಯ ಅವರಿಗೆ ನೋಟಿಸ್ ನೀಡಲು ನಿರ್ಧರಿಸಿದ್ದರೆ; ವ್ಯವಸ್ಥಾಪಕ ಪ್ರಬಂಧಕ ನಾಗರಾಜ್, ಉಪ ವ್ಯವಸ್ಥಾಪಕ ಪ್ರಬಂಧಕ ಎಚ್.ಬಿ. ಬೋರಯ್ಯ, ಸಹಾಯಕ ಲೆಕ್ಕಾಧಿಕಾರಿ ನಾಗರಾಜಮೂರ್ತಿ, ಚೆಕ್ ನೀಡಿದ್ದ ಕೆ.ಎ. ಶಂಕರ್ ಹಾಗೂ ಪುಟ್ಟರಾಜು ಎನ್ನುವವರನ್ನು ಅಮಾನತು ಮಾಡಲಾಗಿದೆ.

ಅಧ್ಯಕ್ಷ ಸತೀಶ್ ವಿರುದ್ಧ 29 `ಸಿ' ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲು ಸಹಕಾರ ಇಲಾಖೆಗೆ ವರದಿ ನೀಡಲು ನಿರ್ಧರಿಸಲಾಯಿತು. 18 ಜನರ ಆಡಳಿತ ಮಂಡಳಿ ನಿರ್ದೇಶಕರ ಸಭೆಯಲ್ಲಿ 16 ಮಂದಿ ನಿರ್ದೇಶಕರು ಭಾಗವಹಿಸಿದ್ದರು.

ಮೂವರು ಆರೋಪಿಗಳು: ಬ್ಯಾಂಕಿನಿಂದ್ ಚೆಕ್ ತೆಗೆದುಕೊಂಡು ಹೋಗಲು ಕೆಬ್ಬಳ್ಳಿ ಆನಂದ್, ನಾಗಲಿಂಗಸ್ವಾಮಿ ಅವರ ಜತೆಗೆ ಇನ್ನೊಬ್ಬರೂ ಆಗಮಿಸಿದ್ದರು. ಅವರ ಹೆಸರನ್ನೂ ಅಧಿಕಾರಿಗಳು ಲಿಖಿತವಾಗಿ ಆಡಳಿತ ಮಂಡಳಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.