ನಾಗಮಂಗಲ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಅವಕಾಶ ಕೊಡದೆ. ಒಂದೇ ಪಕ್ಷದ ಪಕ್ಷ ಅಧಿಕಾರ ನಡೆಸಲು ಮತದಾರರು ಅವಕಾಶ ಮಾಡಿಕೊಡಬೇಕು’ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಹೇಳಿದರು.
ತಾಲ್ಲೂಕಿನ ದೇವಲಾಪುರ ಹೋಬಳಿ ಹರದನಹಳ್ಳಿ ಗ್ರಾಮದಲ್ಲಿ ಮಂಗಳವಾರ ವಿ.ಎಲ್.ಎನ್. ನಿರ್ಮಾಣ್ ಕಲ್ಯಾಣ ಭವನದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
‘ಸಮ್ಮಿಶ್ರ ಸರ್ಕಾರವೆಂದರೆ ಚೌಚೌ ಬಾತ್ ಇದ್ದಂತೆ. ಹಿಂದೆ ಧರಂಸಿಂಗ್, ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಮೂರುವರೆ ವರ್ಷಗಳ ಅವಧಿಯಲ್ಲಿ ರೆಸಾರ್ಟ್ ಶಾಸಕರು, ಸಚಿವರು ರೆಸಾರ್ಟ್ ಸುತ್ತಾಡಿ ಕಾಲ ಕಳೆದಿದ್ದಾರೆ. ಆದ್ದರಿಂದ ಒಂದು ಪಕ್ಷದ ಸರ್ಕಾರ ಆಡಳಿತ ನಡೆಸಲು ಅವಕಾಶ ನೀಡಬೇಕು. ಒಬ್ಬರ ಜುಟ್ಟನ್ನು ಮತ್ತೊಬ್ಬರು ಹಿಡಿಯಲು ಅವಕಾಶ ಮಾಡಿಕೊಡಬಾರದು. ಇದರಿಂದ ಅಭಿವೃದ್ಧಿ ಕಾರ್ಯ ಮಾಡುವುದಕ್ಕೂ ಕಷ್ಟವಾಗುತ್ತದೆ’ ಎಂದು ಹೇಳಿದರು.
‘ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವವರು ಮಾತನಲ್ಲಿ ಪ್ರಜಾಪ್ರಭುತ್ವವಾದಿಗಳು. ಹಿಂದಿನಿಂದ ಹಿಟ್ಲರ್ ವಾದಿಗಳು. ಮಾತನಾಡುವುದು ಆಚಾರ, ಮಾಡುವುದು ಅನಾಚಾರ. ಪ್ರಧಾನಿ ನರೇಂದ್ರ ಮೋದಿ ಅವರು ಮಾತಿನಿಂದ ಜನರನ್ನು ಮರುಳು ಮಾಡುತ್ತಿದ್ದಾರೆ. ಧರ್ಮ ಮತ್ತು ಜಾತಿಗಳ ನಡುವೆ ಕಚ್ಚಾಡುವಂತಹ ವಾತಾವರಣ ನಿರ್ಮಾಣ ಮಾಡುತ್ತಿ ದ್ದಾರೆ. ಇದನ್ನು ಬಿಟ್ಟು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪ್ರಗತಿಪರವಾಗಿದ್ದು ಬಂಡವಾಳ ಹೂಡಿಕೆ, ಉದ್ಯೋಗ ಹಂಚಿಕೆ ಮತ್ತು ಜಿಡಿಪಿಯಲ್ಲಿ ದೇಶಕ್ಕೆ ಪ್ರಥಮ ಸ್ಥಾನದಲ್ಲಿದೆ. ಹೇಮಾವತಿ ನಾಲೆಗಳ ಅಧುನೀಕರಣ ಮಾಡಿದ್ದು ನಮ್ಮ ಸರ್ಕಾರ. ಅದನ್ನು ಇಲ್ಲಿಯವರೆಗೆ ನವೀಕರಣ ಮಾಡದೇ ತಡೆಯಲಾಗಿತ್ತು. ಅಭಿವೃದ್ಧಿ ಕಲಸ ಮಾಡುವವರಿಗೆ ಜನರು ಆಶೀರ್ವಾದ ಮಾಡಬೇಕು’ ಎಂದರು.
ನಿರ್ಮಾಣ್ ಶೆಲ್ಟರ್ಸ್ನ ಎಂ.ಡಿ. ವಿ. ಲಕ್ಷ್ಮಿನಾರಾಯಣ, ಶಾಸಕ ಎನ್. ಚಲುವರಾಯಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ದಾಸೇಗೌಡ, ಎಪಿಎಂಸಿ ಅಧ್ಯಕ್ಷೆ ನಾಗರತ್ನಮ್ಮ, ರಾಜ್ಯ ಕೃಷಿ ಸಾವಯವ ಮಿಷನ್ ಉಪಾಧ್ಯಕ್ಷ ಎಚ್.ಟಿ. ಕೃಷ್ಣೇಗೌಡ, ರಾಜ್ಯ ಸಹಕಾರ ಮಹಾಮಂಡಲದ ನಿರ್ಧೇಶಕ ಬಿ. ರಾಜೇಗೌಡ, ಎನ್. ಲಕ್ಷ್ಮೀಕಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜೆ. ರಾಜೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹುಚ್ಚೇಗೌಡ, ಎನ್.ಕೆ. ವಸಂತಾಮಣಿ, ನರಸಿಂಹಮೂರ್ತಿ, ಸುಜಾತಾ ಕೃಷ್ಣ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.