ಮೇಲುಕೋಟೆ : ಚೆಲುವನಾರಾಯಣಸ್ವಾಮಿ ದೇವಾಲಯದಿಂದ ಪಂಚೆ, ತುಳಸಿ ಮಾಲೆಗಳನ್ನೊಳಗೊಂಡ ಶೇಷಪ್ರಸಾದವನ್ನು ಸ್ಥಾನೀಕರಾದ ನಾಗರಾಜ ಅಯ್ಯಂಗಾರ್, ಕರಗಂ ನಾರಾಯಣ ಐಯ್ಯಂಗಾರ್ ಮತ್ತು ಅರ್ಚಕ ಕೃಷ್ಣಸ್ವಾಮಿ ಭಟ್ ಅವರು ಕೊಂಡೊಯ್ದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪಾರ್ಥಿವ ಶರೀರಕ್ಕೆ ವೇದಘೋಷಗಳ ನಡುವೆ ಬುಧವಾರ ಅರ್ಪಿಸಿದರು.
ಯದುವಂಶದ ಕುಲದೈವ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಿಂದ ಮೈಸೂರು ಮಹಾರಾಜರಿಗೆ ಮಾತ್ರ ಸಲ್ಲುವ ಈ ಮಹಾಪ್ರಸಾದವನ್ನು ದೇವಾಲಯದ ವತಿಯಿಂದ ಕಳುಹಿಸಿಕೊಡಲಾಯಿತು.
ಪಾಂಡವಪುರ ಉಪವಿಭಾಗಧಿಕಾರಿ ವಾಣಿ ಮತ್ತು ತಹಶೀಲ್ದಾರ್ ಶಿವಕುಮಾರಸ್ವಾಮಿ ಸಹ ಈ ವೇಳೆ ಹಾಜರಿದ್ದು, ದೇವಾಲಯದ ಅನೂಚಾನ ಪರಂಪರೆ ಅನುಷ್ಠಾನಕ್ಕೆ ನೇತೃತ್ವ ವಹಿಸಿದ್ದರು. ಶ್ರೀಚೆಲುವನಾರಾಯಣಸ್ವಾಮಿಯ ದೇವಾಲಯದ ಶೇಷವಸ್ತ್ರವನ್ನು ಬೆಳ್ಳಿಪಲ್ಲಕ್ಕಿಯಲ್ಲಿ ಸಾಗಿದ ಅಂತಿಮ ಯಾತ್ರೆಯ ವೇಳೆ ಒಡೆಯರ್ ಪಾರ್ಥಿವ ಶರೀರಕ್ಕೆ ಹೊದಿಸಲಾಗಿತ್ತು.
ಒಡೆಯರ್ ಹೆಸರಲ್ಲಿ ಪೂಜೆ : ಚೆಲುವನಾರಾಯಣಸ್ವಾಮಿಗೆ ನಡೆದ ಬೆಳಗಿನ ಸಹಸ್ರನಾಮ ಪೂಜೆಯ ವೇಳೆ ಅನೂಚಾನ ಪದ್ಧತಿಯಂತೆ ಮೈಸೂರು ಮಹಾಸಂಸ್ಥಾನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಆತ್ಮಕ್ಕೆ ಶಾಂತಿ ದೊರೆಯಲಿ ಮತ್ತು ಅವರ ಅಗಲಿಕೆಯ ನೋವು ತಡೆದುಕೊಳ್ಳವ ಶಕ್ತಿಯನ್ನು ಕುಟುಂಬಕ್ಕೆ ಭಗವಂತ ಕರುಣಿಸಲಿ ಎಂದು ಸಂಕಲ್ಪಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ದೇಗುಲದ ಅರ್ಚಕರಾದ ವಿದ್ವಾನ್ ಆನಂದಾಳ್ವಾರ್, ನಾರಾಯಣಭಟ್ಟರ್, ಪರಿಚಾರಕ ಪಾರ್ಥಸಾರಥಿ, ಸ್ಥಾನೀಕರಾದ ತಿರುನಾದರಾಯಣ ಅಯ್ಯಂಗಾರ್, ಶ್ರೀರಾಮನ್, ಪ್ರಸನ್ನ, ಶ್ರೀನಿವಾಸನರಸಿಂಹನ್ ಮುಂತಾದ ಸಿಬ್ಬಂದಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.