ಮಂಡ್ಯ: ತಿಂಗಳ ಉಪವಾಸ, ಈದ್– ಉಲ್– ಫಿತ್ರ್ ಆಚರಣೆ ಮುಗಿಸಿದ ಮುಸ್ಲಿಮರು ಭಾನುವಾರ ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನದಲ್ಲಿ ಭಾನುವಾರ ಸಂಭ್ರಮಿಸಿದರು. ಕುಟುಂಬ ಸದಸ್ಯರೊಂದಿಗೆ ಬಂದಿದ್ದ ಅವರು ಇಡೀ ದಿನ ಉದ್ಯಾನದಲ್ಲಿ ಬಗೆಬಗೆಯ ತಿನಿಸು ಸೇವಿಸಿ ಆನಂದ ಅನುಭವಿಸಿದರು.
ಉದ್ಯಾನದಲ್ಲಿ ಜನ ಜಾತ್ರೆ ಏರ್ಪಟ್ಟಿತ್ತು. ಸುತ್ತಲು ವಿವಿಧ ತಿನಿಸುಗಳನ್ನು ಮಾರಾಟ ಮಾಡುವ ಅಂಗಡಿಗಳು ತಲೆ ಎತ್ತಿದ್ದವು. ಬೇಯಿಸಿದ ಬಿಸಿಬಿಸಿ ಕಡಲೆಕಾಯಿ, ಚುರುಮುರಿ, ಗೋಬಿ ಮಂಚೂರಿ, ಪಾನಿಪುರಿ ಅಂಗಡಿಗಳು ಎಲ್ಲೆಂದರಲ್ಲಿ ತಲೆ ಎತ್ತಿದ್ದವು. ದಿನವಿಡೀ ಮೋಡಮುಚ್ಚಿದ ವಾತಾವರಣ ಇದ್ದ ಕಾರಣ ಜನರು ತಂಗಾಳಿ ಸವಿದರು. ಉದ್ಯಾನವಿಡೀ ಮಕ್ಕಳ ಜಾತ್ರೆಯಂತಾಗಿತ್ತು. ಅಲ್ಲಿದ್ದ ಪರಿಕರಗ
ಳೊಂದಿಗೆ ಆಟವಾಡಿದ ಮಕ್ಕಳು ಆನಂದ ಅನುಭವಿದರು. ಮಹಿಳೆಯರು, ಹಿರಿಯರು, ಯುವಕರು ಎಲ್ಲರೂ ಸೇರಿ ಹಸಿರು ವಾತಾವರಣದಲ್ಲಿ ದಿನ ಕಳೆದರು.
ಮಹಿಳೆಯರು ಮನೆಯಲ್ಲೇ ಬಗೆ ಬಗೆಯ ತಿನಿಸುಗಳನ್ನು ಮಾಡಿಕೊಂಡು ಬಂದಿದ್ದರು. ಕೆಲವರು ಬೆಳಿಗ್ಗೆಯ ತಿಂಡಿಯನ್ನೂ ಉದ್ಯಾನದಲ್ಲೇ ಸವಿದರು. ಮಧ್ಯಾಹ್ನವಾಗುತ್ತಲೇ ಹೆಚ್ಚು ಜನರು ಉದ್ಯಾನದತ್ತ ಬಂದರು. ಮಧ್ಯಾಹ್ನದ ಊಟವನ್ನು ಅಲ್ಲೇ ಮುಗಿಸಿದರು. ಸಂಜೆಯಾಗುತ್ತಲೇ ಉದ್ಯಾನದಲ್ಲಿ ಅತೀ ಹೆಚ್ಚು ಜನರು ಸೇರಿದ್ದರು. ಅಲ್ಲೇ ಇದ್ದ ಅಂಗಡಿಗಳಲ್ಲಿ ಇಷ್ಟದ ತಿನಿಸುಗಳನ್ನು ಸೇವಿಸಿದರು. ಸ್ವಲ್ಪ ಚಳಿ ಇದ್ದ ಕಾರಣ ಬೇಯಿಸಿದ ಕಡಲೆಕಾಯಿಗೆ ಬೇಡಿಕೆ ಹೆಚ್ಚಿತ್ತು. ಪಾನಿಪುರ ಅಂಗಡಿಕಾರರು ದಿನವಿಡೀ ಮಾರಾಟ ಮಾಡಿದರು.
‘30 ದಿನಗಳ ಕಾಲ ರೋಜಾ ಆಚರಣೆ ಮಾಡುತ್ತೇವೆ. ದಿನಕ್ಕೆ ಐದು ಬಾರಿ ಕುರ್ ಆನ್ ಪಠಣ ಮಾಡುತ್ತಾ ಇರುತ್ತೇವೆ. ಮನೆಯಲ್ಲಿ ಮಹಿಳೆಯರೂ ಪಠಣ ಮಾಡುತ್ತಾ ಭಕ್ತಿಯ ಅಲೆಯ ನಡುವೆ ಇರುತ್ತಾರೆ. ತಿಂಗಳ ಕಾಲ ಗಾಂಭೀರ್ಯ ಇರುತ್ತದೆ. ರಂಜಾನ್ ಮಾಸ ಮುಗಿದ ದಿನ ಎಲ್ಲರೂ ಪ್ರವಾಸಗಳಿಗೆ ತೆರಳುತ್ತಾರೆ. ಉಳಿದವರು ಸಮೀಪದ ಉದ್ಯಾನಕ್ಕೆ ತೆರಳಿ ವಿಹಾರ ಮಾಡುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.