ADVERTISEMENT

ಕಾವೇರಿ ಒಡಲಿಗೆ ಕಲುಷಿತ ನೀರು: ರೈತ ಸಂಘ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 5:32 IST
Last Updated 19 ಡಿಸೆಂಬರ್ 2013, 5:32 IST

ಶ್ರೀರಂಗಪಟ್ಟಣ: ಕಾವೇರಿ ನದಿಗೆ ಪಟ್ಟಣ ಹಾಗೂ ಸುತ್ತಮುತ್ತಲಿನ ರೆಸಾರ್ಟ್‌ಗಳ ಮಲಿನ ನೀರು ಸೇರುತ್ತಿದ್ದು, ನದಿ ಪಾತ್ರದ ಜನರು ಕಲುಷಿತ ನೀರು ಕುಡಿಯುವುದರಿಂದ ಕಾಮಾಲೆ, ವಿಷಮಶೀತ ಜ್ವರದಂತಹ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ರೈತ ಸಂಘದ ಕಾರ್ಯಕರ್ತರು ಬುಧವಾರ ಸ್ಥಳೀಯ ಪುರಸಭೆಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಎಲ್ಲ ಬಡಾವಣೆಗಳ ನೀರು ನದಿಗೆ ಸೇರುತ್ತಿದೆ. ಒಳ ಚರಂಡಿ ಕಾಮಗಾರಿಗೆ ಸೇರುವ ಶೌಚಾಲಯದ ತ್ಯಾಜ್ಯ ನೇರವಾಗಿ ನದಿಗೆ ಹರಿಯುತ್ತಿದೆ. ನದಿಯ ಕೆಳ ಭಾಗದ ನಗರಗಳು ಮತ್ತು ಗ್ರಾಮಗಳ ಜನರು ಇದೇ ನೀರನ್ನು ಕುಡಿಯುಲು ಹಾಗೂ ಸ್ನಾನಕ್ಕೆ ಬಳಸುತ್ತಿದ್ದಾರೆ. ಪಟ್ಟಣದ ನಾಗರಿಕರಿಗೆ ಶುದ್ಧವಾದ ಕುಡಿಯುವ ನೀರು ಕೊಡುತ್ತಿಲ್ಲ.

ರಾತ್ರಿ ವೇಳೆ  ಕಾರ್ಖಾನೆಯಿಂದ ಕೆಟ್ಟ ಗಾಳಿ ಹಾಗೂ ಧೂಳು ಹೊರ ಸೂಸುತ್ತಿದೆ. ಇಷ್ಟಾದರೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇಲ್ಲವೆ ಸ್ಥಳೀಯ ಪುರಸಭೆ ಯಾವುದೇ ಕ್ರಮ ವಹಿಸುತ್ತಿಲ್ಲ. ಪಶ್ಚಿಮವಾಹಿನಿಯಲ್ಲಿ ಖಾಸಗಿ ವ್ಯಕ್ತಿಗಳು ಸರ್ಕಾರಿ ಜಾಗವನ್ನು ಅತಿಕ್ರಮಿಸುತ್ತಿದ್ದಾರೆ. ಇದು ನಿಮಗೆ ಕಾಣುತ್ತಿಲ್ಲವೆ? ಎಂದು ಕೆ.ಎಸ್‌.ನಂಜುಂಡೇಗೌಡ ಪ್ರಶ್ನಿಸಿದರು. ಪಾಂಡು, ಅಲ್ಲಾಪಟ್ಟಣ ಕೆಂಪೇಗೌಡ, ಕೊಡಿಯಾಲ ಜವರೇಗೌಡ, ಕೃಷ್ಣೇಗೌಡ, ದೊಡ್ಡೇಗೌಡನಕೊಪ್ಪಲು ರವಿ, ಬಲ್ಲೇನಹಳ್ಳಿ ಮಂಜುನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.