ADVERTISEMENT

‘ಕಾವೇರಿ ನದಿ ಪ್ರಾಧಿಕಾರ’ ರಚನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 10:19 IST
Last Updated 26 ಅಕ್ಟೋಬರ್ 2017, 10:19 IST
‘ಕಾವೇರಿ ನದಿ ಪ್ರಾಧಿಕಾರ’ ರಚನೆಗೆ ಆಗ್ರಹ
‘ಕಾವೇರಿ ನದಿ ಪ್ರಾಧಿಕಾರ’ ರಚನೆಗೆ ಆಗ್ರಹ   

ಶ್ರೀರಂಗಪಟ್ಟಣ: ಕಾವೇರಿ ನದಿ ಉಗಮ ಸ್ಥಾನದಿಂದ ನದಿ ಸೇರುವವರೆಗೆ ಕಾರ್ಖಾನೆ, ಕಸಾಯಿಖಾನೆ, ಹೋಟೆಲ್‌ ಇತರ ಕಡೆಗಳಿಂದ ಕಾವೇರಿ ನದಿಗೆ ಕಲುಷಿತ ನೀರು ಸೇರುತ್ತಿದ್ದು, ಗಂಗಾ ನದಿ ಪ್ರಾಧಿಕಾರದ ಮಾದರಿಯಲ್ಲಿ ಕಾವೇರಿ ನದಿ ಪ್ರಾಧಿಕಾರ ರಚಿಸಬೇಕು ಎಂದು ಸಾಧು, ಸಂತರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿದರು.

ಕಾವೇರಿ ಜನ ಜಾಗೃತಿ ರಥಯಾತ್ರೆ ಅಂಗವಾಗಿ ತಾಲ್ಲೂಕಿನ ಕೆಆರ್‌ಎಸ್‌ಗೆ ಬುಧವಾರ ಆಗಮಿಸಿ ಕಾವೇರಿ ರಥ ಆಗಮಿಸಿದ ವೇಳೆ ನಡೆದ ಸಭೆಯಲ್ಲಿ ಈ ಆಗ್ರಹ ಕೇಳಿ ಬಂತು. ಕಾವೇರಿ ನದಿಯ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಪ್ರಯೋಗಶಾಲೆಗಳ ವರದಿಯಿಂದ ದೃಢಪಟ್ಟಿದೆ.

ನದಿ ದಂಡೆಯ ಪಟ್ಟಣಗಳ ಕೊಳಚೆ ನೀರು ಅಡೆತಡೆಯಿಲ್ಲದೆ ನದಿಗೆ ಸೇರುತ್ತಿದೆ. ನದಿಯಲ್ಲಿ ಸ್ನಾನ ಮಾಡಿದರೆ ಮೈ ತುರಿಕೆ ಉಂಟಾಗುತ್ತಿದೆ. ಕಾವೇರಿ ನದಿಗೆ ತ್ಯಾಜ್ಯ ಸೇರುವುದನ್ನು ತಡೆಯದಿದ್ದರೆ ಚರಂಡಿಯಾಗಿ ಮಾರ್ಪಡಲಿದೆ’ ಎಂದು ಕರ್ನಾಟಕ– ತಮಿಳುನಾಡು ಕಾವೇರಿ ನದಿ ಸಂರಕ್ಷಣಾ ಒಕ್ಕೂಟದ ಸಂಚಾಲಕ ಡಾ.ಭಾನುಪ್ರಕಾಶ್‌ ಶರ್ಮಾ ಕಳವಳ ವ್ಯಕ್ತಪಡಿಸಿದರು.

ADVERTISEMENT

ಆದಿ ಶಂಕರ ಮಠದ ಗಣೇಶ ಸ್ವರೂಪಾನಂದಗಿರಿ ಸ್ವಾಮೀಜಿ ಮಾತನಾಡಿ, ‘ಕಾವೇರಿ ಜನ ಜಾಗೃತಿ ರಥಯಾತ್ರೆ ಅ.22ರಂದು ಆರಂಭವಾಗಿ ಕೊಡಗು, ಮೈಸೂರು, ಮಂಡ್ಯ ಜಿಲ್ಲೆಯ ನೂರಾರು ಹಳ್ಳಿಗಳಲ್ಲಿ ಸಂಚರಿಸಿದೆ. ರಥಯಾತ್ರೆಯ ಮಾರ್ಗದ ಯದ್ದಕ್ಕೂ ಕರ ಪತ್ರಗಳ ಮೂಲಕ ನದಿ ಸಂರಕ್ಷಣೆ ಕುರಿತು ಜನ ಜಾಗೃತಿ ಮೂಡಿಸಲಾಗುತ್ತಿದೆ.

ನ.13ರಂದು ಕಾವೇರಿ ನದಿ ಬಂಗಾಳಕೊಲ್ಲಿ ಸೇರುವ ತಮಿಳುನಾಡಿನ ಪೂಂಪುಹಾರ್‌ಗೆ ಈ ಯಾತ್ರೆ ತಲುಪಲಿದ್ದು, ಅಲ್ಲಿ ಬೃಹತ್‌ ಸಮಾವೇಶ ನಡೆಸಲಾಗುವುದು’ ಎಂದು ಹೇಳಿದರು. ತಿ. ನರಸೀಪುರದ ಮಾತೆ ವೇದವಲ್ಲಿ, ರಾಜೇಶ್ವರಾನಂದ ಸ್ವಾಮೀಜಿ, ಕೊಡಗಿನ ಚಂದ್ರಮೋಹನ್‌, ತಮಿಳುನಾಡಿನ ಕಾಳೇಶ್ವರ ಸ್ವಾಮೀಜಿ ಸೇರಿದಂತೆ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳ ಸಾಧುಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.