ADVERTISEMENT

ಕಾವೇರಿ ನೀರಿಗೆ ಬೊಂಬೆಗಳ ಧರಣಿ!

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 7:30 IST
Last Updated 17 ಅಕ್ಟೋಬರ್ 2012, 7:30 IST
ಕಾವೇರಿ ನೀರಿಗೆ ಬೊಂಬೆಗಳ ಧರಣಿ!
ಕಾವೇರಿ ನೀರಿಗೆ ಬೊಂಬೆಗಳ ಧರಣಿ!   

ಮಂಡ್ಯ: ಕಾವೇರಿ ನೀರಿಗಾಗಿ ಧರಣಿ, ದಸರಾ ಜಂಬೂ ಸವಾರಿ, ಕೃಷ್ಣ ಲೀಲೆ, ರಾಮಾಯಣ.. ಹೀಗೆ ಹಲವು ಬಗೆಯ ರೂಪಕಗಳನ್ನು ದಸರಾ ಹಬ್ಬದ ಅಂಗವಾಗಿ ನೆಹರು ನಗರದ 5ನೇ ಕ್ರಾಸ್‌ನ ನಿವಾಸಿ ಮಮತಾ ರಮೇಶ್ ಅವರು ತಮ್ಮ ಮನೆಯಲ್ಲಿ ಬೊಂಬೆಗಳ ಮೂಲಕ ರೂಪಿಸಿದ್ದಾರೆ.

ಕಾವೇರಿ ನೀರಿನ ಹಕ್ಕು ನಮ್ಮದು ಎಂಬ ಹೋರಾಟವನ್ನು ಬೊಂಬೆಗಳ ಮೂಲಕ ರೂಪಿಸಿದ್ದಾರೆ. ಕಾವೇರಿ ವನದ ಎದುರು ನೀರಿಗಾಗಿ ಧರಣಿ ಕುಳಿತುಕೊಂಡಿರುವ ದೃಶ್ಯ ಅಲ್ಲಿದೆ.

ಕೃಷ್ಣ ಬಾಲ್ಯದ ಜೀವನದ ವಿವಿಧ ಹಂತಗಳನ್ನು ಬಿಂಬಿಸುವ ಕೃಷ್ಣ ಲೀಲೆಯ ರೂಪಕ, ರಾಮಾಯಣದಲ್ಲಿ ರಾಮನ ಪಟ್ಟಾಭಿಷೇಕದ ದೃಶ್ಯಾವಳಿಗಳನ್ನು ಅಂದವಾಗಿ ನಿರ್ಮಿಸಿದ್ದಾರೆ.

ಸಾಂಪ್ರದಾಯಿಕ ಹಿಂದೂ ಮದುವೆ ಮನೆಯ ಚಿತ್ರಣ ಕಣ್ಣಿಗೆ ಕಟ್ಟುವಂತಿದೆ. ಸಮುದ್ರ ಮಂಥನ, ದಶಾವತಾರ ಮುಂತಾದ ಬಗೆಯ ರೂಪಕಗಳು ಅಲ್ಲಿವೆ.

ಯಕ್ಷಗಾನ, ಸೈನಿಕ, ಮಹಾರಾಜ, ದೇವತೆಗಳು ಸೇರಿದಂತೆ ಹಲವು ಬಗೆ ಬಗೆಯ ಬೊಂಬೆಗಳು ಗಮನ ಸೆಳೆಯುತ್ತವೆ.

20 ವರ್ಷಗಳಿಂದ ಬೊಂಬೆಗಳನ್ನು ಕೂಡಿಸುತ್ತಾ ಬಂದಿದ್ದಾರೆ. 1,500 ಹೆಚ್ಚು ಬೊಂಬೆಗಳಿವೆ. ಮಂಗಳವಾರದಿಂದ ಒಂಬತ್ತು ದಿನಗಳವರೆಗೆ ಗೊಂಬೆಗಳನ್ನು ಕೂಡಿಸಲಾಗುತ್ತದೆ. ನೋಡಗರು ಆಗಮಿಸುವುದರಿಂದ ಒಂದು ವಾರ ಕಾಲ ಹೆಚ್ಚಾಗಿಯೂ ಇಡುವುದುಂಟು ಎನ್ನುತ್ತಾರೆ ಮಮತಾ ರಮೇಶ್.

ಪ್ರತಿ ವರ್ಷ ಹೊಸ, ಹೊಸ ರೂಪಕಗಳನ್ನು ಮಾಡಲಾಗುತ್ತದೆ. ಈ ವರ್ಷ ಕಾವೇರಿ ನೀರಿಗಾಗಿ ಹೋರಾಟವನ್ನು ಮಾಡಲಾಗಿದೆ. ಮೂರು ತಿಂಗಳಿನಿಂದ ಸಿದ್ಧತೆ ನಡೆದಿದೆ. ಮಗಳು ಸ್ಮಿತಾ ಹಾಗೂ ಪತಿ ರಮೇಶ್ ಎಲ್ಲ ಹಂತದಲ್ಲಿಯೂ ಸಹಕಾರ ನೀಡುತ್ತಾರೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.