ಮಂಡ್ಯ: ವಿಚಾರಣಾಧೀನ ಕೈದಿಗಳಿಂದಲೇ ಬೇಕರಿ ಉತ್ಪನ್ನಗಳನ್ನು ತಯಾರಿಸುವ ಕೆಲಸಕ್ಕೆ ಇಲ್ಲಿನ ಜಿಲ್ಲಾ ಕೇಂದ್ರ ಉಪ ಕಾರಾಗೃಹದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ಖಾರಾ, ಬೆಣ್ಣೆ, ಕೊಬ್ಬರಿ ಬಿಸ್ಕತ್ತು, ಬ್ರೆಡ್, ಬನ್, ತರಕಾರಿ ಮತ್ತು ಮೊಟ್ಟೆ ಪಫ್, ದಿಲ್ಪಸಂದ್, ಕ್ರೀಮ್ ಬನ್, ಕೇಕ್ ಸೇರಿದಂತೆ ಸುಮಾರು 15 ಬಗೆಬಗೆಯ ತಿನಿಸುಗಳನ್ನು ತಯಾರಿಸಲಾಗುತ್ತದೆ.
ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ಪಳಗಿರುವ ಮೈಸೂರಿನ ಕಾರಾಗೃಹ ದಲ್ಲಿನ ಮೂರು ಮಂದಿ ಸಜಾ ಬಂಧಿಗಳು, ಮಂಡ್ಯದ ಕಾರಾಗೃಹ ದಲ್ಲಿರುವ ಆಸಕ್ತ ಐದು ಮಂದಿ ವಿಚಾರಣಾಧೀನ ಕೈದಿಗಳಿಗೆ ಒಂದು ತಿಂಗಳು ತರಬೇತಿ ನೀಡಲಾಗುತ್ತಿದೆ.
ಬೇಕರಿ ಉತ್ಪನ್ನ ತಯಾರಿಕೆಗೆ ಬೇಕಾಗುವ ಎಲೆಕ್ಟ್ರಿಕಲ್ ಮೆಷಿನ್ಗಾಗಿ ಸುಮಾರು ₨ 1 ಲಕ್ಷ ಮತ್ತು ಕೊಠಡಿ ನವೀಕರಣಕ್ಕಾಗಿ ಸುಮಾರು ₨ 1 ಲಕ್ಷ ವ್ಯಯ ಮಾಡಲಾಗಿದೆ.
‘ಉತ್ಪನ್ನಗಳ ತಯಾರಿಕೆಗೆ ಮುನ್ನ ಹದ ಮಾಡಿಕೊಳ್ಳುವುದು, ಉತ್ಪನ್ನದ ಅಗತ್ಯಕ್ಕೆ ತಕ್ಕಂತೆ ಉಷ್ಣಾಂಶವನ್ನು ಯಂತ್ರದಲ್ಲಿ ಹೊಂದಾಣಿಕೆ ಮಾಡುವುದು ಸೇರಿದಂತೆ ಇತರೆ ಕೆಲಸವನ್ನು ಹೇಳಿಕೊಡಲಾಗುತ್ತಿದೆ. ಆಸಕ್ತಿಯಿಂದ ಅವರೂ ಕಲಿಯುತ್ತಿದ್ದಾರೆ’ ಎಂದು ತರಬೇತಿ ನೀಡುತ್ತಿರುವ ಸಜಾ ಬಂಧಿ ಪ್ರತಿಕ್ರಿಯಿಸಿದರು.
ಕಾರಾಗೃಹದ ಅಧೀಕ್ಷಕ ಎಂ. ಸುಂದರ್ ಮಾತನಾಡಿ, ‘ಇಲ್ಲಿ ತಯಾರಿಸುವ ಎಲ್ಲ ಉತ್ಪನ್ನಗಳನ್ನು ‘ಪರಿವರ್ತನ’ ಹೆಸರಿನಲ್ಲಿ ತಯಾರಿಸ ಲಾಗುತ್ತಿದೆ. ವಿಚಾರಾಣಾಧೀನ ಕೈದಿಗಳು ಕಾರಾಗೃಹದಿಂದ ‘ಪರಿವರ್ತನೆ’ಗೊಂಡು ಹೊರಹೋದ ಬಳಿಕ, ಸ್ವಉದ್ಯೋಗದ ಮೂಲಕ ಬದುಕು ಕಂಡುಕೊಳ್ಳಬೇಕು ಎನ್ನುವ ಕಾರಣಕ್ಕೆ ಉತ್ಪನ್ನಗಳಿಗೆ ಈ ಹೆಸರನ್ನಿ ಡಲಾಗಿದೆ’ ಎಂದು ಪ್ರತಿಕ್ರಿಯಿಸಿದರು.
‘ಶುಚಿ, ರುಚಿ ಮತ್ತು ಉತ್ತಮ ಗುಣಮಟ್ಟವನ್ನು ನಾವು ತಯಾರಿಸುವ ಉತ್ಪನ್ನಗಳಲ್ಲಿ ಕಾಯ್ದುಕೊಳ್ಳುತ್ತೇವೆ. ಕಾರಾಗೃಹದ ಆವರಣದಲ್ಲಿಯೇ ಅಂಗಡಿ ಮಳಿಗೆ ತೆರೆಯುವ ಆಲೋಚನೆಯೂ ಇದೆ. ಆದಾಯ ಮುಖ್ಯವಲ್ಲ. ತರಬೇತಿ ಪಡೆದು ಹೊರಹೋಗುವವರು ಸ್ವಉದ್ಯೋಗ ಮಾಡಬೇಕು ಎನ್ನುವುದು ಇದರ ಉದ್ದೇಶ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.