ADVERTISEMENT

ಗಮನ ಸೆಳೆಯುತ್ತಿದೆ ಬನದ ಬದುಕು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 5:50 IST
Last Updated 4 ಅಕ್ಟೋಬರ್ 2011, 5:50 IST

ಶ್ರೀರಂಗಪಟ್ಟಣ: ದಸರಾ ಉತ್ಸವ ಅಂಗವಾಗಿ ಪಟ್ಟಣದಲ್ಲಿ ಏರ್ಪಡಿಸಿರುವ `ಬನದ ಬದುಕು~ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಗಮನ ಸೆಳೆಯುತ್ತಿದೆ.

ಶ್ರೀರಂಗ ವೇದಿಕೆಯ ಬಲಭಾಗದಲ್ಲಿ ಬಗೆ ಬಗೆಯ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಹೆಸರಾಂತ ಛಾಯಾಗ್ರಾಹಕರಾದ ಲೋಕೇಶ್ ಮೊಸಳೆ, ಕೆ.ಶಿವ, ಪಾಂಡವಪುರ ಉಪ ವಿಭಾಗಾಧಿಕಾರಿ ಜಿ.ಪ್ರಭು ಅವರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದ ವನ್ಯ ಪ್ರಾಣಿ, ಪಕ್ಷಿಗಳ ಆಕರ್ಷಕ ಹಾಗೂ ವಿಭಿನ್ನ ಛಾಯಾಚಿತ್ರಗಳು ಇಲ್ಲಿವೆ.

ಕಾಡು ನಾಯಿ ಜಿಂಕೆಯನ್ನು ಕೊಂದು ರಕ್ತ ಸಹಿತ ಮಾಂಸ ತಿನ್ನುವ ದೃಶ್ಯ ಭೀಕರ ಎನಿಸಿದರೂ ನೈಜತೆ ಬಿಂಬಿಸುತ್ತದೆ. ಬ್ಲೂಟೇಲ್ದ್ ಬೀ ಈಟರ್ ಜೋಡಿಗಳು, ಸಂತಾನಾಭಿವೃದ್ಧಿಯಲ್ಲಿ ತೊಡಗಿರುವ ರಿವರ್ ಟರ್ನ್, ನವಜಾತ ಮರಿಗೆ ಗುಟುಕು ನೀಡುತ್ತಿರುವ ರಿವರ್     ಟರ್ನ್, ಗೂಡು ಕಟ್ಟಲು ಕಡ್ಡಿ ಹೊತ್ತೊಯ್ಯುತ್ತಿರುವ ಐಬಿಸ್, ಇನ್ನೇನು ಗಿಡದ ಮೇಲೆ ಕೂರುತ್ತಿದೆ ಎನ್ನುವ ನೈಟ್ ಹೆರಾನ್, ಜಲಕ್ರೀಡೆ ಆಡುವಂತೆ ಕಾಣುವ ಹೆಜ್ಜಾರ್ಲೆ ಛಾಯಾಚಿತ್ರಗಳು ಮತ್ತೆ ಮತ್ತೆ ನೋಡಬೇಕೆನಿಸುತ್ತವೆ.

ಇಳಿ ಸಂಜೆಯಲ್ಲಿ, ಕಾಡಿನ ಹಾದಿಯಲಿ ಧೂಳೆಬ್ಬಿಸಿ ಬರುತ್ತಿರುವ ಸಲಗ, ಕಾಡು ಕೋಳಿ, ನೀರಾನೆ, ಕೆಂಬಣ್ಣದ ಸಾಕು ಕೋಳಿಯ ಹುಂಜ ಇತರ ಪಕ್ಷಿ, ಪ್ರಾಣಿಗಳ ಚಿತ್ರಗಳು ಗಮನ ಸೆಳೆಯುತ್ತವೆ.

ದಸರಾ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ಬಂದವರು ವನ್ಯಜೀವಿ ಛಾಯಾಚಿತ್ರಗಳನ್ನು ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಮಂಗಳವಾರ ಸಂಜೆ ವರೆಗೂ ಈ ಪ್ರದರ್ಶನ ಇರುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.